ಪುತ್ತೂರಿನಲ್ಲಿ ಸಿಇಟಿ ಪರೀಕ್ಷೆ
ಪುತ್ತೂರು, ಮೇ 4: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವೃತ್ತಿಪರ ಶಿಕ್ಷಣದ ಸಿ.ಇ.ಟಿ. ಪರೀಕ್ಷೆ ಬುಧವಾರ ಮತ್ತು ಗುರುವಾರ ನಡೆಯಲಿದ್ದು, ನಗರದ ಸಂತ ಫಿಲೋಮಿನಾ ಕಾಲೇಜು, ವಿವೇಕಾನಂದ ಕಾಲೇಜು ಮತ್ತು ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜು ಕೇಂದ್ರಗಳಲ್ಲಿ ಸಿ.ಇ.ಟಿ. ಪರೀಕ್ಷೆ ನಡೆಯುತ್ತಿದೆ.
ದ.ಕ. ಜಿಲ್ಲೆಯ 22 ಕೇಂದ್ರಗಳಲ್ಲಿ ಒಟ್ಟು 12,352 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಫಿಲೋಮಿನಾ ಕಾಲೇಜು ಕೇಂದ್ರದಲ್ಲಿ 608, ವಿವೇಕಾನಂದ ಕಾಲೇಜು ಕೇಂದ್ರದಲ್ಲಿ 800 ಮತ್ತು ಕೊಂಬೆಟ್ಟು ಪ.ಪೂ. ಕಾಲೇಜು ಕೇಂದ್ರದಲ್ಲಿ 512 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಮೇ 4 ರಂದು ಬೆಳಗ್ಗೆ ಬಯೋಲಾಜಿ, ಅಪರಾಹ್ನ ಗಣಿತ ಶಾಸ್ತ್ರ, ಮೇ 5 ರಂದು ರಾಸಾಯನ ಶಾಸ್ತ್ರ, ಅಪರಾಹ್ನ ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೈ ಗಡಿಯಾರು ಕಟ್ಟಲು ಅವಕಾಶವಿಲ್ಲದ ಕಾರಣ ಪರೀಕ್ಷಾ ಕೊಠಡಿಯೊಳಗೆ ಗೋಡೆ ಗಡಿಯಾರಗಳನ್ನು ಅಳವಡಿಸಲಾಗಿದೆ. ಪುತ್ತೂರು ಸಹಾಯಕ ಕಮಿಷನರ್ ಡಾ ಕೆ.ವಿ. ರಾಜೇಂದ್ರ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿದ್ದಾರೆ.
ಆಯಾ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಸಹಾಯಕ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯಾ ಕೇಂದ್ರಗಳಲ್ಲಿ ಒಬ್ಬರು ವೀಕ್ಷಕ, ಒಬ್ಬರು ಉತ್ತರ ಪತ್ರಿಕೆ ಭದ್ರತಾಧಿಕಾರಿ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ.