ಮಂಗಳೂರು:ಇಸ್ರೇಲ್ಗೆ ಹೊರಟವನಲ್ಲಿ ಸಜೀವ ಗುಂಡು ಪತ್ತೆ!
ಮಂಗಳೂರು,ಮೇ4: ಬಜ್ಪೆ ವಿಮಾನ ನಿಲ್ದಾಣದಿಂದ ಮುಂಬೈ ಮೂಲಕ ಇಸ್ರೇಲ್ಗೆ ಹೊರಟಿದ್ದ ವಾಮಂಜೂರಿನ ವ್ಯಕ್ತಿಯೊಬ್ಬನ ಲಗೇಜ್ನಲ್ಲಿ ಎರಡು ಸಜೀವ ಗುಂಡುಗಳು ಪತ್ತೆಯಾಗಿದೆ.
ವಾಮಂಜೂರು ನಿವಾಸಿ ಜಾನ್ ಜೋಸೆಫ್ ಫೆರ್ನಾಂಡಿಸ್ ಎಂಬಾತನೇ ಇಸ್ರೇಲ್ ಪ್ರಯಾಣಿಕನಾಗಿದ್ದು, ಪರವಾನಿಗೆ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಸಾಗಿಸುವುದು ಅಪರಾಧವಾಗಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಂದರ್ಭ ಸಜೀವ ಗುಂಡುಗಳು ಪತ್ತೆಯಾದ ಕಾರಣ ಆತನನ್ನು ಬಂಧಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘‘ಮೇ 2ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಜೆಟ್ ಏರ್ವೇಸ್ಮೂಲಕ ಮುಂಬೈಗೆ ತೆರಳುತ್ತಿದ್ದ ಜಾನ್ ಜೋಸೆಫ್ ಫೆರ್ನಾಂಡಿಸ್ ಎಂಬಾತನ ಲಗೇಜ್ನಲ್ಲಿ ಸ್ಕ್ರೀನಿಂಗ್ ವೇಳೆ ಸಜೀವ ಗುಂಡುಗಳು ಪತ್ತೆಯಾಗಿತ್ತು. ಕಳೆದ ಆರು ವರ್ಷಗಳಿಂದ ಆತ ಇಸ್ರೆಲ್ನಲ್ಲಿ ಹೌಸ್ ನರ್ಸ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದು, ಎರಡು ವರ್ಷಗಳ ಹಿಂದೆ ಇಸ್ರೇಲ್ನಿಂದ ಕಾರ್ಗೊ ಮೂಲಕ ಮನೆ ಸಾಮಗ್ರಿಗಳಿಂದ ತುಂಬಿದ್ದ ಬ್ಯಾಗೊಂದನ್ನು ಕಳುಹಿಸಿದ್ದ. ಆಗಾಗ್ಗೆ ಊರಿಗೆ ಬರುತ್ತಿದ್ದ ಆತ ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದು, ಮತ್ತೆ ಇಸ್ರೇಲ್ಗೆ ತೆರಳುವ ಸಂದರ್ಭ ಕಾರ್ಗೊ ಮೂಲಕ ಬಂದಿದ್ದ ಹಳೆ ಬ್ಯಾಗ್ನೊಂದಿಗೆ ಮೇ 2ರಂದು ವಿಮಾನವೇರಲು ಸಿದ್ದತೆ ನಡೆಸಿದ್ದ. ಬ್ಯಾಗ್ನ ಕೈ ಬಳಿಯ ಪಾಕೆಟ್ನಲ್ಲಿದ್ದ ಸಜೀವ ಗುಂಡುಗಳ ಬಗ್ಗೆ ಅರಿವಿಲ್ಲದೆ ಆತ ಪ್ರಯಾಣಕ್ಕೆ ಮುಂದಾಗಿದ್ದ ಎಂದು ಆತ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾನೆ. ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದೆ’’ ಎಂದು ಬಜ್ಪೆ ಠಾಣಾಧಿಕಾರಿ ‘ವಾರ್ತಾಭಾರತಿ’ಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.