ಬಿಎಸ್ಸೆನ್ನೆಲ್ ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಇರ್ದೆ ಗ್ರಾಮಸ್ಥರು
ಪುತ್ತೂರು, ಮೇ 4: ಪುತ್ತೂರು ತಾಲೂಕಿನ ಇರ್ದೆ ಬಿಎಸ್ಸೆನ್ನೆಲ್ ನೆಟ್ವರ್ಕ್ ಸಮಸ್ಯೆಯ ವಿರುದ್ಧ ಸಿಡಿದೆದ್ದ ಗ್ರಾಹಕರು ಇರ್ದೆಯ ಬಿಎಸ್ಸೆನ್ನೆಲ್ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಒಂದು ವಾರದಿಂದ ಇರ್ದೆ- ಬೆಟ್ಟಂಪಾಡಿ ಪರಿಸರದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲ. ಈ ಕುರಿತು ಇಲಾಖೆಯ ಗಮನಕ್ಕೆ ತಂದರೂ ಇಲಾಖೆ ಅಧಿಕಾರಿಗಳು ಮಾತ್ರ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಗ್ರಾಹಕರು ಇರ್ದೆಯ ಬಿಎಸ್ಸೆನ್ನೆಲ್ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಇಲಾಖೆಗೆ ಮನವಿ ಸಲ್ಲಿಸಿದರು.
ಒಂದು ವಾರದಿಂದ ನೆಟ್ವರ್ಕ್ ಇಲ್ಲದೆ ಭಾರೀ ಸಮಸ್ಯೆಯಾಗಿದೆ. ಸರಕಾರಿ ಕಚೇರಿಗಾಗಲಿ, ತುರ್ತು ಸಂದರ್ಭದಲ್ಲಿ ಕರೆ ಮಾಡಬೇಕೆಂದರೂ ಮೊಬೈಲ್ಗೆ ನೆಟ್ವರ್ಕ್ ಲಭ್ಯವಾಗುತ್ತಿಲ್ಲ. ಬಡ ರಿಕ್ಷಾ ಚಾಲಕರಿಗೂ ಇದರಿಂದ ತೀವ್ರ ತೊಂದರೆಯಾಗಿದೆ. ಸಮಸ್ಯೆಯ ಕುರಿತು ಇಲಾಖೆಯ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ, ಕಚೇರಿಯಲ್ಲಿ ಕೇಳಿದರೆ ಜನರೇಟರ್ ಸಮಸ್ಯೆ ಇದೆ ಎನ್ನುತ್ತಾರೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಬೇಕಾಗಿರುವುದು ಇಲಾಖೆಯ ಜವಾಬ್ದಾರಿಯಾಗಿದೆ. ತಕ್ಷಣ ದುರಸ್ತಿ ಮಾಡದೇ ಇದ್ದಲ್ಲಿ ಗ್ರಾಹಕರು ಸಾಮೂಹಿಕವಾಗಿ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ವಿಭಾಗೀಯ ಇಂಜಿನಿಯರ್ ಶ್ರೀಧರ ರಾವ್ ಮಾತನಾಡಿ, ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ. ಜನರೇಟರ್ ದುರಸ್ತಿ ಕಾರ್ಯಕ್ಕೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಆದರೆ ಅವರು ಇನ್ನೂ ದುರಸ್ತಿ ಮಾಡದೇ ಇರುವುದು ಇಲ್ಲಿನ ನೆಟ್ವರ್ಕ್ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಇಂದು ಸಂಜೆಯೊಳಗೆ ದುರಸ್ತಿ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಬಿಎಸ್ಸೆನ್ನೆಲ್ ಅಧಿಕಾರಿಗಳಾದ ಸುಬ್ಬಣ್ಣ ನಾಯ್ಕ, ಟೆಲಿಕಾಂ ಅಧಿಕಾರಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.