ಪತ್ನಿಯ ಕೊಲೆಗೈದಿದ್ದ ಆರೋಪಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2016-05-06 12:20 GMT

ಕಾಸರಗೋಡು, ಮೇ 6: ಕಾರಡ್ಕ ಮಾವುಂಗಾಲ್ ಪಾಡಿಕೊಚ್ಚಿಯಲ್ಲಿ ಮಹಿಳೆಯೋರ್ವರ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದ ಮಹಿಳೆಯ ಪತಿಯ ಮೃತದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುತ್ತಿಕೋಲ್ ಕರಿವೇಡಗದ ಗಂಗಾಧರ (58) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇರಿಯ ಎಂಬಲ್ಲಿನ ಶೇಂದಿ ಅಂಗಡಿ ಸಮೀಪದ ಮರದ ರೆಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಮಧ್ಯಾಹ್ನ ವೇಳೆ ಮೃತದೇಹ ಪತ್ತೆಯಾಗಿದೆ. ಗುರುವಾರ ಸಂಜೆ ಈತನ ಪತ್ನಿ ಲಕ್ಷ್ಮಿ ( 52) ಎಂಬವರ ಶವ ಕತ್ತು ಕೊಯ್ದು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೃತ್ಯದ ಬಳಿಕ ಈಕೆಯ ಪತಿಯು ನಾಪತ್ತೆಯಾಗಿದ್ದು, ಗುರುವಾರ ಸಂಜೆ ಇಲ್ಲೇ ಹತ್ತಿರದಲ್ಲಿರುವ ಶೇಂದಿ ಅಂಗಡಿಗೆ ಬಂದು ಶೇಂದಿ ಸೇವಿಸಿ ತೆರಳಿದ್ದ ಎನ್ನಲಾಗಿದೆ.

ಮೃತ ಮಹಿಳೆಯ ಪುತ್ರಿ ಗಾಯತ್ರಿಯ ಪತಿ ಅಜಿತ್ ಆಟೊ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು, ಗುರುವಾರ ಮಧ್ಯಾಹ್ನ ಮನೆಗೆ ಬಂದಾಗ ಲಕ್ಷ್ಮಿ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಹಿತ್ತಿಲಿನಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಹಿತ್ತಿಲಿನಲ್ಲಿ ಕೃತ್ಯ ನಡೆದಿದ್ದರಿಂದ ಯಾರ ಗಮನಕ್ಕೂ ಬಂದಿರಲಿಲ್ಲ.

ಆಟೋ ಚಾಲಕ ಅಜಿತ್ ಪ್ರತಿದಿನ ರಾತ್ರಿ ಮನೆಗೆ ತಲುಪುವಾಗ ತಡವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೇಡಡ್ಕ ಕರಿವೇಡಗ ನಿವಾಸಿಗಳಾಗಿದ್ದ ಲಕ್ಷ್ಮಿ ಮತ್ತು ಗಂಗಾಧರ ಕಳೆದ ಒಂದು ತಿಂಗಳಿನಿಂದ ತಮ್ಮ ಪುತ್ರಿ ಗಾಯತ್ರಿ ಮನೆಯಲ್ಲಿ ವಾಸಿಸುತ್ತಿದ್ದರು. ಲಕ್ಷ್ಮಿ ಮತ್ತು ಗಂಗಾಧರ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.

ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News