×
Ad

ಬಂಟ್ವಾಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಒಲಿದ ಬಂಟ್ವಾಳ ತಾಪಂ ಗದ್ದುಗೆ

Update: 2016-05-10 19:55 IST

ಬಂಟ್ವಾಳ, ಮೇ 10: ಇಲ್ಲಿನ ತಾಲೂಕು ಪಂಚಾಯತ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಚಂದ್ರಹಾಸ ಕರ್ಕೇರ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಅಬ್ಬಾಸ್ ಅಲಿ ಬಿ.ಎಂ. ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಬಿ.ಸಿ.ರೋಡಿನ ತಾಪಂ ಸಭಾಂಗಣದಲ್ಲಿ ಮಂಗಳೂರು ಆಯುಕ್ತ ಡಾ. ಅಶೋಕ್ ಡಿ.ಆರ್. ಆಯ್ಕೆ ಪ್ರಕ್ರಿಯೆ ನಡೆಸಿದರು.

ತಾಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿ ನಿಗದಿಯಾಗಿತ್ತು. ಪಕ್ಷದ ವರಿಷ್ಠರ ತೀರ್ಮಾನದಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ಚಂದ್ರಹಾಸ ಕರ್ಕೇರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿಯವರ ಹೆಸರು ಅಂತಿಮಗೊಳಿಸಲಾಯಿತು.

ಮಂಗಳವಾರ ಪೂರ್ವಾಹ್ನ 11 ಗಂಟೆಗೆ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಇಬ್ಬರು ಸದಸ್ಯರು ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದರು.

ಬಿಜೆಪಿಯಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಸಂಜೆ 3 ಗಂಟೆಗೆ ನಡೆದ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.

ತಹಶೀಲ್ದಾರ್ ಪುರಂದರ ಹೆಗ್ಡೆ, ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ ಸಹಕರಿಸಿದರು.

ತಾಪಂ ಸಂಖ್ಯಾಬಲ:

ಬಂಟ್ವಾಳ ತಾಪಂ 34 ಸದಸ್ಯ ಬಲವನ್ನು ಹೊಂದಿದ್ದು ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಹಿಂದಿಗಿಂತ ಒಂದು ಸ್ಥಾನ ಹೆಚ್ಚಳಗೊಂಡಿದೆ. ಈ ಪೈಕಿ ಕಾಂಗ್ರೆಸ್ 22 ಸ್ಥಾನಗಳನ್ನು ಗೆದ್ದುಕೊಂಡು ಪೂರ್ಣ ಬಹುಮತವನ್ನು ಪಡೆದಕೊಂಡಿದ್ದರೆ, ಬಿಜೆಪಿ 12 ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರು ಅನಾಯಾಸವಾಗಿ ಅಧಿಕಾರದ ಗದ್ದುಗೆ ಏರಿದರು.

ಅಭಿನಂದನೆ:

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ್ ಜೈನ್, ಮಂಜುಳಾ ಮಾಧವ ಮಾವೆ, ಮಮತಾಗಟ್ಟಿ, ಮಾಜಿ ಸದಸ್ಯ ಎಪ್.ಉಮರ್ ಫಾರೂಕ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹಾರ ಹಾಕಿ ಅಭಿನಂದಿಸಿದರು.

ಬ್ಲಾಕ್ ಅಧ್ಯಕ್ಷರು

ತಾಪಂನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಇಬ್ಬರೂ ಕ್ರಮವಾಗಿ ಮುಡಿಪು ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ಇವರ ಅವಧಿ ಈಗಾಗಲೇ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಎರಡೂ ಬ್ಲಾಕಿಗೂ ನೂತನ ಅಧ್ಯಕ್ಷರ ಆಯ್ಕೆಯಾಗುವ ನಿರೀಕ್ಷೆ ಇದೆ. ಚಂದ್ರಹಾಸ ಕರ್ಕೇರ 2005ರಲ್ಲಿ ತಾಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಳಿಕ ಅವರು ಅಧ್ಯಕ್ಷರಾಗುವ ಅವಕಾಶ ಬಂದಿತ್ತಾದರೂ ಕೊನೆಗಳಿಗೆಯಲ್ಲಿ ಕೈ ತಪ್ಪಿತ್ತು. ಇದೀಗ ಪೂರ್ಣ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಾರ್ಯಭಾರ ವಹಿಸುವ ಅವಕಾಶ ಒದಗಿಬಂದಿದ್ದು ಇದನ್ನು ಸಚಿವ ರಮಾನಾಥ ರೈ ಕೂಡಾ ತಮ್ಮ ಅಭಿನಂದನಾ ಭಾಷಣದಲ್ಲಿ ಉಲ್ಲೇಖಿಸಿದರು.

ಈ ಹಿಂದೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದು ಕ್ಷೇತ್ರ ಪುನರ್‌ವಿಂಗಡನೆಯಾದ ಬಳಿಕ ಮಂಗಳೂರು ವಿಧಾನ ಸಬಾ ಕ್ಷೇತ್ರಕ್ಕೊಳಪಟ್ಟ ಮುಡಿಪು ಬ್ಲಾಕ್ ಕಾಂಗ್ರೆಸ್‌ಗೆ ಅಧ್ಯಕ್ಷರಾಗಿದ್ದಾರೆ. ಬಂಟ್ವಾಳ ತಾಪಂಗೆ ನರಿಂಗಾನ ಇರಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಇವರು ಪಿಯುಸಿ, ಐಟಿಐ ಶಿಕ್ಷಣವನ್ನು ಪಡೆದಿದ್ದು, ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರೂ ಆಗಿದ್ದಾರೆ.

ಉಪಾಧ್ಯಕ್ಷ ಅಬ್ಬಾಸ್ ಅಲಿ ಇದೇ ಮೊದಲ ಬಾರಿಗೆ ಮಂಚಿ ಸಾಲೆತ್ತೂರು ಕ್ಷೇತ್ರದಿಂದ ತಾಪಂ ಪ್ರವೇಶಿಸಿದ್ದು ಅವರು ಕೂಡಾ ಐದು ವರ್ಷದ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಕಂಪ್ಯೂಟರ್ ಇಂಜಿನಿಯರಿಂಗ್ ಪದವಿದರರು ಆಗಿದ್ದು ಪಕ್ಷದ ಯುವ ನೇತಾರರಾಗಿದ್ದಾರೆ. ಒಟ್ಟಾರೆ ಬಂಟ್ವಾಳ ತಾಪಂನ ಸಾರಥ್ಯ ಹಳೆ ಬೇರು ಹೊಸ ಚಿಗುರು ಕೈಗೆ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News