ಸಚಿವ ಯು.ಟಿ. ಖಾದರ್ ಹೆತ್ತವರ ಗೋರಿಗೆ ಹಾನಿಯೆಸಗಿದ್ದ ವ್ಯಕ್ತಿಯಿಂದ ಪ್ರಾಯಶ್ಚಿತ್ತ ಪ್ರಯತ್ನ
Update: 2016-05-10 22:18 IST
ಉಳ್ಳಾಲ, ಮೇ 10: ಉಳ್ಳಾಲ ಸೈಯದ್ ಮದನಿ ದರ್ಗಾದ ಬಳಿಯಲ್ಲಿದ್ದ ಸಚಿವ ಯು.ಟಿ.ಖಾದರ್ ಹೆತ್ತವರ ಸಮಾಧಿಯನ್ನು ಇತ್ತೀಚೆಗೆ ಹಾನಿಗೊಳಿಸಿದ್ದ ಆರೋಪಿ ಶರೀಫ್ ಉಳ್ಳಾಲ್ ತನ್ನ ವರ್ತನೆಯಿಂದ ತಾನೇ ಬೇಸರಗೊಂಡಿದ್ದು ಇದಕ್ಕೆ ಪ್ರಾಯಶ್ಚಿತ್ತ ಎಂಬಂತೆ ಇದೀಗ ಉಳ್ಳಾಲದಲ್ಲಿ ಯು.ಟಿ.ಖಾದರ್ ಅವರಿಗೆ ಅಭಿನಂಧನೆ ಸಲ್ಲಿಸುವ ಬ್ಯಾನರ್ ಅಳವಡಿಸಿದ್ದಾರೆ.
ಅಲ್ಲದೆ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಬ್ಯಾನರ್ನಲ್ಲಿರುವ ಖಾದರ್ರ ಭಾವಚಿತ್ರಕ್ಕೆ ಚುಂಬಿಸಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಬ್ಯಾನರ್ನಲ್ಲಿ ‘ತಮ್ಮ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಜನಸಾಮಾನ್ಯರಿಗೆ ಮಾಡುವಂತಹ ಉತ್ತಮ ಕಾರ್ಯಗಳು ಜನಮಾನಸದಲ್ಲಿ ಹಚ್ಚಹಸುರಾಗಿ ಉಳಿದಿವೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಅಲ್ಲಾಹು ಆರೋಗ್ಯ, ಆಯುಷ್ಯ ಕರುಣಿಸಲಿ’ ಎಂದು ಬರೆಯಲಾಗಿದೆ.
ಸಚಿವ ಖಾದರ್ ಅವರ ಸಹನೆ, ಉತ್ತಮ ಗುಣನಡತೆಯೇ ನನ್ನನ್ನು ಬದಲಾಯಿಸಿತು ಎಂದು ಶರೀಪ್ ಅವರು ಸ್ಥಳೀಯರಲ್ಲಿ ಹೇಳುತ್ತಿದ್ದಾರೆ.