ಮಹದಾಯಿ-ಕಳಸಾ ಬಂಡೂರಿ ಹೋರಾಟಕ್ಕೆ ಉಪ್ಪಿನಂಗಡಿಯ ನೇತ್ರಾವತಿ ತಿರುವು ವಿರೋಧಿ ಹೋರಾಟಗಾರರ ಬೆಂಬಲ
Update: 2016-05-12 17:59 IST
ಉಪ್ಪಿನಂಗಡಿ, ಮೇ 12: ಗದಗ ಜಿಲ್ಲೆಯ ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ- ಕಳಸಾ- ಬಂಡೂರಿ ಹೋರಾಟಕ್ಕೆ ಉಪ್ಪಿನಂಗಡಿಯ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟಗಾರರು ಬೆಂಬಲ ನೀಡಿದ್ದು, ಗುರುವಾರ ಅಲ್ಲಿಗೆ ತೆರಳಿ ಹೋರಾಟದಲ್ಲಿ ಭಾಗವಹಿಸಿ ಹೋರಾಟಗಾರರಿಗೆ ನೈತಿಕ ಬೆಂಬಲ ನೀಡಿದ್ದಾರೆ.
ಮಹದಾಯಿ ಹಾಗೂ ಕಳಸಾ ಬಂಡೂರಿ ನದಿಗಳನ್ನು ಮಲಪ್ರಭಾ ನದಿಗೆ ಜೋಡಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ನರಗುಂದದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದು, ಗುರುವಾರಕ್ಕೆ ಈ ಧರಣಿ 302ನೆ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭ ಉಪ್ಪಿನಂಗಡಿಯ ನೇತ್ರಾವತಿ ನದಿ ತಿರುವು ಹೋರಾಟಗಾರರಾದ ಯು.ಜಿ.ರಾಧಾ, ರವಿಕಿರಣ್ ಕೊಲ, ಡಿ.ಜೆ. ಭಟ್ ಕೊಲ, ಸುಧೀರ್ ವನಸುಮ ನೆಕ್ಕಿಲಾಡಿ, ಅನಂತ ಮುರ ಹಾಗೂ 10ನೆ ತರಗತಿಯ ವಿದ್ಯಾರ್ಥಿ ಅಚಲ್ ಗೋವಿಂದ ನರಗುಂದದ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಹದಾಯಿ- ಕಳಸಾ- ಬಂಡೂರಿ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದರು.