×
Ad

ರೈತರ ಹಿತ ಕಾಪಾಡಲು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಯತ್ನ : ಸಚಿವ ರೈ

Update: 2016-05-12 22:15 IST

ಬೆಳ್ತಂಗಡಿ, ಮೇ 12: ಕೃಷಿಕರು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಹಾಗೂ ಉತ್ತಮ ಬೆಲೆ ದೊರೆತಾಗ ಕೃಷಿಕರು ಉತ್ತಮ ಜೀವನ ನಡೆಸಬಲ್ಲರು. ಸರಕಾರವು ಕೃಷಿಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ಬಾರಿ ಅಡಿಕೆ ಕೊಳೆರೋಗ ಬಂದಾಗ 30 ಕೋಟಿ ರೂ. ಪರಿಹಾರ ನೀಡಿದ ಕಾಂಗ್ರೆಸ್ ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ರೈತರ ಹಿತ ಕಾಪಾಡಲು ಪ್ರಯತ್ನಿಸುತ್ತಿದೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಗುರುವಾರ ಬೆಳ್ತಂಗಡಿ ಹಳೆಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಾಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಬೆಳ್ತಂಗಡಿ ಹಾಗೂ ಸುಳ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು ಇದೇ ರೀತಿ ಇತರ ಕಡೆಯೂ ಪ್ರಯೋಜನವಾಗುವಂತೆ ಪ್ರಯತ್ನಿಸಲಾಗುವುದು. ಕೃಷಿಗೆ ಹಾನಿ ಉಂಟಾದಾಗ ಕೃಷಿಕರಿಗೆ ಪ್ರಯೋಜನವಾಗಲು ಆವರ್ತ ನಿಧಿಯನ್ನು ಪ್ರಾರಂಭಿಸಲಾಗಿದೆ ಎಂದರು.

ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕೃಷಿಕರ ರಕ್ಷಣೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯು ಸೂಕ್ತ ವ್ಯವಸ್ಥೆ ಹಾಗೂ ಮಾಹಿತಿಗಳನ್ನು ಕಲ್ಪಿಸುವ ಮೂಲಕ ಕೃಷಿಕರ ಬೆನ್ನೆಲುಬಾಗುತ್ತಿದೆ. ಕೃಷಿಗೆ ಪ್ರಮುಖ ನೀರಿನ ಅಗತ್ಯವಿರುವುದರಿಂದ ಸರಕಾರ ಬೇರೆ ಜಿಲ್ಲೆಗಳಿಗೆ ನೀರಿಗಾಗಿ ಸಾವಿರಗಟ್ಟಲೆ ರೂ. ಬಿಡುಗಡೆ ಮಾಡುತ್ತಿದ್ದು ಅದರಂತೆ ದ.ಕ. ಉಭಯ ಜಿಲ್ಲೆಗಳಿಗೆ ನೀರು ಸಂರಕ್ಷಣೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಮಾರುಕಟ್ಟೆ ಪ್ರಾಂಗಣದ ಸಂಪರ್ಕ ರಸ್ತೆಯ ಮುಂಭಾಗದಲ್ಲಿ ತನಿಖಾ ಠಾಣೆ ಹಾಗೂ ಗೇಟ್ ನಿರ್ಮಾಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬ್ಯಾಂಕ್ ಮತ್ತು ಅಂಚೆ ಕಚೇರಿ ಕಟ್ಟಡದ ಉದ್ಘಾಟನೆ, ಆವರಣಗೋಡೆಯು ಹಾಗೂ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ, ಬೆಳ್ತಂಗಡಿ ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ನ.ಪಂ.ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿ.ಪಂ.ಸದಸ್ಯರಾದ ನಮಿತಾ, ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ಎಪಿಎಂಸಿ ಉಪಾಧ್ಯಕ್ಷ ಲಕ್ಷ್ಮಣ, ಕೃಷಿ ಮಾರಾಟ ಇಲಾಖಾ ಸಹಾಯಕ ನಿರ್ದೇಶಕ ರಾಮಚಂದ್ರ ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ. ಮಹೇಶ್, ನಿರ್ದೇಶಕರುಗಳು ಉಪಸ್ಥಿತರಿದ್ದರು.

ಸತೀಶ್ ಕೆ. ಸ್ವಾಗತಿಸಿ ಕಾರ್ಯದರ್ಶಿ ಎಚ್.ಕೆ. ಕೃಷ್ಣ ಮೂರ್ತಿ ವರದಿ ವಾಚಿಸಿದರು. ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯಲ್ಲಿ ಮಳೆಯಿಲ್ಲದೆ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದು ಬರಗಾಲ ಪ್ರದೇಶವಲ್ಲ. ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು ಲಕ್ಯಾ ಡ್ಯಾಂನಿಂದ ನೀರನ್ನು ತರುವ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ಕಾಣಲು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನವಾಗಬೇಕಾಗಿದೆ. ಇದರಿಂದ ಅಂತರ್ಜಲ ಹೆಚ್ಚುವುದರೊಂದಿಗೆ ಕೃಷಿಕರಿಗೂ ಅನುಕೂಲವಾಗುತ್ತದೆ. ಸರಕಾರ ಈ ಬಗ್ಗೆ ಚಿಂತನೆ ನಡೆಸುತ್ತಿದೆ.

 ಬಿ. ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News