ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ, ರೌಡಿ ಶೀಟರ್ ಮೇಲೆ ತಲವಾರು ದಾಳಿ
Update: 2016-05-13 14:55 GMT
ಮಂಗಳೂರು, ಮೇ 13: ತಂಡವೊಂದು ಯುವಕನ ಮೇಲೆ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಇಂದು ಬಜಾಲ್ ಬಳಿ ನಡೆದಿದೆ.
ಬಜಾಲ್ ಕಲ್ಲಕಟ್ಟೆ ನಿವಾಸಿ ಶ್ರೇಯಸ್ (26) ಹಲ್ಲೆಗೊಳಗಾದ ಯುವಕ.
ಈತ 2008ರ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಎಂದು ಹೇಳಲಾಗಿದೆ. ಈತನ ಮೇಲೆ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ ಹೊತ್ತಿಗೆ ಸುಮಾರು 5 ಮಂದಿಯ ತಂಡ ಈತನ ಮೇಲೆ ಬಜಾಲ್ ಬಳಿ ತಲವಾರಿನಿಂದ ದಾಳಿ ನಡೆಸಿದ್ದು, ಗಾಯಗೊಂಡ ಈತನನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.