ಪ್ರೋತ್ಸಾಹ ನೀಡಲು ಆಗ್ರಹ
ಉಡುಪಿ, ಮೇ 14: ವಿಕಲಚೇತನ ಕಲಾವಿದರಿಗೆ ಸರಕಾರ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ವಿಕಲ ಚೇತನರ ಮಹಾಸಂಘಗಳ ಒಕ್ಕೂಟ ಉಡುಪಿ ಜಿಲ್ಲೆ ಒತ್ತಾಯಿಸಿದೆ.
ವಿಕಲಚೇತನ ಕಲಾವಿದರನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಉದ್ದೇಶದಿಂದ ಇತ್ತೀಚೆಗೆ ಉಡುಪಿಯಲ್ಲಿ ವಿಕಲಚೇತನ ಜಗದೀಶ್ ಭಟ್ ಅಂಬಲಪಾಡಿ ನೇತೃತ್ವದಲ್ಲಿ ವಿಕಲಚೇತನ ಕಲಾ ತಂಡ ಹುಟ್ಟಿಕೊಂಡಿದ್ದು, ಈ ತಂಡ ಸಾರ್ವಜನಿಕವಾಗಿ ಹುಲಿವೇಷ ಕುಣಿತ, ಯಕ್ಷಗಾನ ಪ್ರದರ್ಶನಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ವಿಲ್ಫ್ರೇಡ್ ಗೋಮ್ಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ವಿಕಲಚೇತನ ಕಲಾವಿದರ ಬದುಕು ತುಂಬಾ ಶೋಚನೀಯವಾಗಿದೆ. ಆದುದರಿಂದ ಈ ತಂಡಕ್ಕೆ ಜಿಲ್ಲಾಡಳಿತ ಪ್ರೋತ್ಸಾಹ ನೀಡುವ ಮೂಲಕ ತಂಡವನ್ನು ಉಳಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಜಗದೀಶ್ ಭಟ್, ಜಿಲ್ಲಾ ಕಾರ್ಯದರ್ಶಿ ರಾಜಶೇಖರ್, ಚಂದ್ರಕಾಂತ್ ಇಂದ್ರಾಳಿ, ಪ್ರಸಾದ್ ನಿಟ್ಟೂರು ಉಪಸ್ಥಿತರಿದ್ದರು.