×
Ad

ಸುಳ್ಯ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವತಿಯಿಂದ ಬಾಳಿಲ ಪ್ರಶಸ್ತಿ ಪ್ರದಾನ

Update: 2016-05-15 12:54 IST

ಸುಳ್ಯ, ಮೇ 15: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವತಿಯಿಂದ ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ, ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.

ಹವ್ಯಕ ಭಾಷಾ ಸಾಹಿತ್ಯ ಬೆಳವಣಿಗೆಗಾಗಿ ಕಥೆ, ಪ್ರಬಂಧ, ಕವನ, ನಗೆ ಬರಹ ಹಾಗೂ ವ್ಯಂಗ್ಯಚಿತ್ರ ವಿಭಾಗಗಳಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಮಾರಂಭದಲ್ಲಿ ನೆರವು ನೀಡಲಾಯಿತು. ಹವ್ಯಕ ಭಾಷೆಯಲ್ಲಿ ಧರ್ಮ ವಿಜಯ ಎಂಬ ಮಹಾಕಾವ್ಯವನ್ನು ರಚಿಸಿದ ದಿವಂಗತ ಬಾಳಿಲ ಪರಮೇಶ್ವರ ಭಟ್‌ರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಬಾಳಿಲ ಪ್ರಶಸ್ತಿಗೆ ಈ ವರ್ಷ ಆಯ್ಕೆಯಾಗಿರುವ ಡಾ.ಹರಿಕೃಷ್ಣ ಭರಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರಿಕೃಷ್ಣ ಭರಣ್ಯ, ಹವಿಗನ್ನಡದಲ್ಲಿ ಅಮೂಲ್ಯ ಕೃತಿಗಳು ಬಂದಿವೆ. ಬೇರೆ ಯಾವ ಉಪಭಾಷೆಯಲ್ಲೂ ಇಷ್ಟೊಂದು ಸಾಹಿತ್ಯ ಕೃತಿಗಳು ಬಂದಿಲ್ಲ. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಬಾಳಿಲ ಪರಮೇಶ್ವರ ಭಟ್‌ರ ಸಾಧನೆಗೆ ಯಾವುದೇ ಪ್ರಶಸ್ತಿ, ಪ್ರಚಾರ ಸಿಕ್ಕಿಲ್ಲ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಒಪ್ಪಣ್ಣ ಪ್ರತಿಷ್ಠಾನ ಮಾಡುತ್ತಿರುವುದು ಅಭಿನಂದನೀಯ ಎಂದರು.

ಹಿರಿಯ ಸಾಮಾಜಿಕ-ಧಾರ್ಮಿಕ ಧುರೀಣ ಆನೆಕಾರ ಗಣಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ ಅತಿಥಿಗಳಾಗಿದ್ದರು.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣಶರ್ಮ ಹಳೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ ಎಳ್ಳಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣ ಶರ್ಮ ಹಳೆಮನೆ ಸ್ವಾಗತಿಸಿ, ಕುಮಾರಸ್ವಾಮಿ ತೆಕ್ಕುಂಜ ವಂದಿಸಿದರು. ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕದ್ರಿ ನವನೀತ ಶೆಟ್ಟಿ ಮತ್ತು ಬಳಗದವರಿಂದ ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ಯಕ್ಷಗಾನ-ನಾಟಕಗಳ ಸಮ್ಮಿಲನ ರೂಪವಾಗಿ ವಿಭಿನ್ನ ಕಾರ್ಯಕ್ರಮ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News