ಮೌಲಾನರ ನಿಧನಕ್ಕೆ ಭಟ್ಟರು ಬರೆದ ಸಂತಾಪ ಪತ್ರ
ಇತ್ತೀಚಿಗೆ ಮೂಡಬಿದ್ರೆಯ ಪುತ್ತಿಗೆಯ ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನ ಇ. ಎಂ. ಶಾಫಿ ಸಾಹೇಬರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಸುದ್ದಿ ಕೇಳಿ ಅದೇ ಊರಿನವರಾದ ಖ್ಯಾತ ಶಿಶು ಸಾಹಿತಿ ಪಳಕಳ ಸೀತಾರಾಮ ಭಟ್ಟರು ಮೌಲಾನರ ಪುತ್ರನಿಗೆ ಕೈಬರಹದಲ್ಲಿ ಬರೆದ ಸಂತಾಪ ಪತ್ರ ಇಲ್ಲಿದೆ. ಅದರ ಪೂರ್ಣ ಪಾಠವನ್ನೂ ನೀಡಲಾಗಿದೆ.
ಧರ್ಮಗಳ ನಡುವೆ, ಜನರ ನಡುವೆ ಸಂವಹನವೇ ಅಪರೂಪವಾಗಿರುವ ಈ ದಿನಗಳಲ್ಲಿ ಭಟ್ಟರು ಮನಸ್ಸಿನಾಳದ ವೇದನೆಯಿಂದ ಬರೆದ ಈ ಪ್ರಾಮಾಣಿಕ ಕಾಳಜಿಯ ಪತ್ರ ಎಲ್ಲರಿಗೂ ಮಾದರಿಯಾಗಲಿ.
--------------------------------------------------------
ಪಳಕಳ ಸೀತಾರಾಮ ಭಟ್ಟ, ಎಂ.ಎ., ಬಿ.ಎಡ್
ಶಿಶು ಸಾಹಿತ್ಯ ಮಾಲೆ, ಮಿತ್ತಬೈಲು- 574226
ಮೊ: 9632303500
ತಾ. 10.05.2016
ಪ್ರಿಯ ಅಬ್ದುಸ್ಸಲಾಮ್ ಅವರಿಗೆ ಪ್ರೀತಿಯ ವಂದನೆಗಳು
ಪ್ರಿಯರೇ,
ನಿಮ್ಮ ಪ್ರೀತಿಯ ತಂದೆ, ನಮ್ಮೂರ ನೂರಾನಿ ಮಸೀದಿಯ ಖತೀಬರಾಗಿ ಮೂರು ದಶಕಗಳಿಂದಲೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿ, ಸ್ಥಳೀಯರೆಲ್ಲರ ಪ್ರೀತಿ - ಗೌರವಗಳಿಗೆ ಪಾತ್ರರಾಗಿದ್ದ ಮೌಲಾನಾ ಇಬ್ರಾಹೀಂ ಮುಹಮ್ಮದ್ ಅವರು ನಿಧನರಾದರೆಂಬ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ದುಃಖವಾಯಿತು. ನಿಮ್ಮೆಲ್ಲರ ದುಃಖದಲ್ಲಿ ನಾವು ಸಹಭಾಗಿಗಳು.
ಅಗಲಿದ ಆ ಪುಣ್ಯ ಜೀವಿಯ ಆತ್ಮಕ್ಕೆ ಚಿರಶಾಂತಿಯನ್ನು ಅವರ ಅಗಲಿಕೆಯ ದುಃಖವನ್ನು ಭರಿಸಲು ನಮ್ಮೆಲ್ಲರಿಗೆ ಶಕ್ತಿಯನ್ನು ಅಲ್ಲಾಹ್ ಅನುಗ್ರಹಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ.
ನಿಮ್ಮ ಪ್ರೀತಿಯ ಅಮ್ಮ, ಸಹೋದರರು ಮತ್ತು ಮನೆಯವರಿಗೆಲ್ಲ ನಮ್ಮ ಸಂತಾಪವನ್ನು ತಿಳಿಸುವಿರಾ ?
ಕಳೆದ ನಾಲ್ಕಾರು ತಿಂಗಳ ಅವಧಿಯಲ್ಲಿ ನಾನು ಎರೆಡೆರಡು ಬಾರಿ ಬಿದ್ದು, ಭುಜದ ಎಲುಬು ಜಖಂಗೊಂಡ ಬಳಿಕ ನಾನೀಗ ಎಲ್ಲೂ ಹೋಗುತ್ತಿಲ್ಲ. ಹಾಗಾಗಿ ನಿಮ್ಮ ತಂದೆಯವರು ಅಸೌಖ್ಯದಲ್ಲಿದ್ದ ಸಂಗತಿಯೇ ನನಗೆ ತಿಳಿದಿರಲಿಲ್ಲ. ತಿಳಿದಿದ್ದರೆ ನಾನು ಅವರ ದರ್ಶನ ಪಡೆಯುತ್ತಿದ್ದೆ. ಇನ್ನು ಚಿಂತಿಸಿ ಫಲವಿಲ್ಲ ತಾನೇ ?, ನಮಸ್ಕಾರ.
ಇಂತು ಸ್ನೇಹದ,
ಪಳಕಳ ಸೀತಾರಾಮ ಭಟ್ಟ.
--------------------------------------------------------