×
Ad

3 ವರ್ಷದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 2,528 ಕೋಟಿ ರೂ. ಅನುದಾನ: ಸಚಿವ ಖಮರುಲ್ ಇಸ್ಲಾಂ

Update: 2016-05-20 19:28 IST

ಪುತ್ತೂರು, ಮೇ 20: ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೂರು ವರ್ಷದಲ್ಲಿ 2,528 ಕೋಟಿ ರೂ. ಅನುದಾನವನ್ನು ನೀಡಿದ್ದು, ಹಿಂದೆಂದೂ ನೀಡದಷ್ಟು ಅನುದಾನವನ್ನು ನೀಡುವ ಮೂಲಕ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ರಾಜ್ಯ ವಕ್ಫ್ ಮತ್ತು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.

ಶುಕ್ರವಾರ ಕಟ್ಟತ್ತಾರು ನುಸ್ರತ್ತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ವತಿಯಿಂದ ನಿರ್ಮಿಸಲಾದ ನೂತನ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನಾ ಸಮಾರಂಭದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಪಸಂಖ್ಯಾತರಿಗೆ ಸರಕಾರ ಏನು ಮಾಡುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳುವ ಕೆಲಸವನ್ನು ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ 165 ಭರವಸೆಗಳ ಪೈಕಿ ಈಗಾಗಲೇ 120 ಭರವಸೆಗಳನ್ನು ಈಡೇರಿಸಲಾಗಿದೆ. ಉಳಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಅವರು, 12 ಹೊಸ ಯೋಜನೆಗಳು ಈಗಾಗಲೇ ಸಿದ್ದಗೊಂಡಿದ್ದು ಅದನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.

ಹಿಂದಿನ ಬಿಜೆಪಿ ಸರಕಾರ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ನೀಡಿತ್ತು. ಮೂವರೂ ಬೇರೆ ಬೇರೆ ಬಜೆಟ್‌ಗಳನ್ನು ನೀಡಿದ್ದರು. ಆದರೆ ಅಲ್ಪಸಂಖ್ಯಾತರ ಅಭಿವೃದ್ದಿಗೆ ನೀಡಿದ್ದು 1,443 ಕೋಟಿ ಅನುದಾನ. ಆದರೆ ಸಿದ್ದರಾಮಯ್ಯ ಸರಕಾರ ಮೂರು ವರ್ಷದಲ್ಲಿ 2,528 ಕೋಟಿ ರೂ. ಅನುದಾನವನ್ನು ನೀಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮ್, ಕ್ರೈಸ್ತ, ಜೈನ್, ಸಿಖ್ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯದ ಮಂದಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೆಶದಿಂದ ಸರಕಾರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನವನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ. ವಿವಿಧ ಸ್ಕೀಂಗಳ ಮೂಲಕ ಮೂರು ವರ್ಷದಲ್ಲಿ 600 ಕೋಟಿ ವಿದ್ಯಾರ್ಥಿ ವೇತನವನ್ನು ನೀಡಿದ್ದೇವೆ. ಇದು ದೇಶದಲ್ಲಿಯೇ ಮಾದರಿ ಯೋಜನೆಯಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯ ಸರಕಾರ ವಕ್ಫ್ ಇಲಾಖೆ ಮೂಲಕ ಇಲಾಖೆಯಲ್ಲಿ ನೋಂದಾವಣೆಗೊಂಡ ಮಸೀದಿಗಳ ಇಮಾಮರಿಗೆ ತಿಂಗಳಿಗೆ 3,500 ಮತ್ತು ಮುಅಲ್ಲಿಮರಿಗೆ 2,500 ರೂ. ವೇತನವನ್ನು ನೀಡುತ್ತಿದೆ. ಇದು ದೇಶದಲ್ಲಿ ಯಾವ ರಾಜ್ಯ ಸರಕಾರವೂ ಕೈಗೊಳ್ಳದ ತೀರ್ಮಾನವಾಗಿದೆ ಎಂದರು.

ಮಸೀದಿ ಉದ್ಘಾಟನೆ

ಬೆಳಗ್ಗೆ ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸೈಯದ್ ಅಹ್ಮದ್ ಪೂಕೋಯ ತಂಙಳ್ ನೂತನ ಮಸೀದಿಯನ್ನು ಉದ್ಘಾಟಿಸಿದರು. ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಖುತುಬಾ ಹಾಗೂ ಜುಮಾ ನಮಾಜಿಗೆ ನೇತೃತ್ವ ವಹಿಸಿದ್ದರು.

ದ.ಕ. ಜಿಲ್ಲಾ ವಕ್ಫ್ ಬೋರ್ಡು ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಕುಂಬ್ರ ಮರ್ಕಝುಲ್ ಹುದಾ ಅಧ್ಯಕ್ಷ ಅಸೈಯದ್ ಇಸ್ಮಾಯೀಲ್ ಹಾದಿ ತಂಙಳ್ ಉಜಿರೆ, ಅಸೈಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು, ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಇಬ್ರಾಹೀಂ ಹಾಜಿ ಕಮ್ಮಾಡಿ, ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ, ಬೆಂಗಳೂರು ಆರ್.ಎಂ. ಗ್ರೂಪ್‌ನ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ, ಕೆಪಿಸಿಸಿ ಕರಾವಳಿ ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯೀಲ್ ಸಾಹೇಬ್ ಬೆಳ್ಳಾರೆ, ಜಿಲ್ಲಾ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಎಂ.ಡಿಸಿ ಕುಂಬ್ರ ಇದರ ಅಧ್ಯಕ್ಷ ಹಾಜಿ ಅಹ್ಮದ್ ಬಶೀರ್ ಶೇಕಮಲೆ, ಮಾಡಾವು ಜುಮಾ ಮಸೀದಿ ಅಧ್ಯಕ್ಷ ಹುಸೈನಾರ್ ಸಂತೋಷ್, ಅಬ್ದುಲ್ ಹಮೀದ್ ಫ್ಯಾಮಿಲಿ ಗ್ರೂಪ್ ಮಾಡಾವು, ಕೆಎಂಕೆ ವುಡ್‌ನ ಮಾಲಕ ಅಬ್ದುರ್ರಝಾಕ್ ಎರಬೈಲು, ಅಬ್ದುಲ್ ಶುಕೂರ್ ಮಣಿಲ, ಇಬ್ರಾಹೀಂ ಹಾಜಿ ಸೀಫುಡ್ ಸುಳ್ಯ, ಕುಂಬ್ರ ಕೆಐಸಿ ಮೆನೇಜರ್ ಹುಸೈನ್ ದಾರಿಮಿ ರೆಂಜಲಾಡಿ, ಸ್ಥಳೀಯ ಖತೀಬ್ ದಾವೂದ್ ಸಅದಿ , ಗ್ರಾಪಂ ಸದಸ್ಯರಾದ ಅಬ್ದುಲ್‌ಖಾದರ್ ಮೇರ್ಲ, ಹನೀಪ್ ಕೆ.ಎಂ. ಉಪಸ್ಥಿತರಿದ್ದರು.

ಜಮಾತ್ ಕಮಿಟಿ ಅಧ್ಯಕ್ಷ ಪಿ.ಎಂ. ಅಬ್ದುರ್ರಹ್ಮಾನ್ ಹಾಜಿ ಸ್ವಾಗತಿಸಿದರು. ಶಾಕಿರ್ ಕೆ.ಎಂ. ಕಟ್ಟತ್ತಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News