ಔಷಧಿ ಪೂರೈಕೆಯಲ್ಲಿ ಬಹುಕೋಟಿ ಹಗರಣ: ಆರೋಪ
ಬೆಂಗಳೂರು, ಮೇ 20: ರಾಜ್ಯ ಆರೋಗ್ಯ ಅಭಿಯಾನ ಮಂಡಳಿ ಅಧಿಕಾರಿಗಳು ಮತ್ತು ಬಿಬಿಎಂಪಿ ಆರೋಗ್ಯ ಇಲಾಖಾಧಿಕಾರಿಗಳು ರಾಜ್ಯ ಡ್ರಗ್ಸ್ ಲಾಗಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಔಷಧಿ ಪೂರೈಕೆಯಲ್ಲಿ 1463 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರ ಮಾಡಿರುವ ಆರೋಪದ ಮೇಲೆ ಅಭಿಯಾನದ ಸಹ ಅಧ್ಯಕ್ಷ ಆರೋಗ್ಯ ಸಚಿವ ಯು.ಟಿ.ಖಾದರ್ ಸೇರಿ 10 ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದು ಪಾಲಿಕೆಯ ಮಾಜಿ ಆಡಳಿತ ಪಕ್ಷವಾದ ಬಿಜೆಪಿ ನಾಯಕ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಆರೋಗ್ಯ ಅಭಿಯಾನ ಮಂಡಳಿಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಆರೋಗ್ಯ ಇಲಾಖಾಧಿಕಾರಿಗಳು ರಾಜ್ಯ ಡ್ರಗ್ಸ್ ಲಾಗಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಮಾರು 1463 ಕೋಟಿ ರೂ. ಗಳಿಗೂ ಅಧಿಕ ಔಷಧಿ ಪೂರೈಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅಭಿಯಾನದ ಸಹ ಅಧ್ಯಕ್ಷರಾಗಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಹಗರಣದಲ್ಲಿ ಪ್ರಮುಖ ಪಾಲುದಾರರಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಸಚಿವ ಖಾದರ್ ಅವರೊಂದಿಗೆ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಗೂ ಆರೋಗ್ಯ ಅಭಿಯಾನ ನಿರ್ದೇಶಕರು, ಮುಖ್ಯ ಹಣಕಾಸು ಅಧಿಕಾರಿ, ರಾಜ್ಯ ಡ್ರಗ್ಸ್ ಲಾಗಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು ಹಾಗೂ ಇಲಾಖಾ ಆಯುಕ್ತರು ಹಗರಣದ ಪ್ರಮುಖ ರೂವಾರಿಗಳಾಗಿದ್ದಾರೆ ಎಂದು ದೂರಿದರು.
ಕೇಂದ್ರ ಸರಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದೊಳಗೆ 2015-16ನೆ ಸಾಲಿನಲ್ಲಿ ಡ್ರಗ್ಸ್ ಲಾಗಿಸ್ಟಿಕ್ ಸೊಸೈಟಿಗೆ 44.4 ಕೋಟಿ ರೂ.ಗಳನ್ನು ಆರು ರೆಫರಲ್ ಆಸ್ಪತ್ರೆಗಳು, 27 ಹೆರಿಗೆ ಆಸ್ಪತ್ರೆಗಳು, 38 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಎಲ್ಲ ರೋಗಿಗಳಿಗೂ ಉಚಿತವಾಗಿ ಔಷಧ ಒದಗಿಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆಪಾದಿಸಿದರು.
ಡ್ರಗ್ಸ್ ಸೊಸೈಟಿ ದಾಖಲೆಗಳ ಪ್ರಕಾರ 82 ವಿವಿಧ ಔಷಧಿ ಕಂಪನಿಗಳಿಂದ ಔಷಧಗಳನ್ನು ಪೂರೈಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, 15ಕ್ಕೂ ಹೆಚ್ಚು ಕಂಪನಿಗಳು ಅಸ್ತಿತ್ವದಲ್ಲೇ ಇಲ್ಲ. ಉಳಿದ ಕಂಪನಿಗಳು ಕಳಪೆ ಗುಣಮಟ್ಟದ ಔಷಧ ತಯಾರಿಕಾ ಸಂಸ್ಥೆಗಳಾಗಿವೆ ಎಂದು ಆರೋಪಿಸಿದರು.
250 ಎಂ.ಜಿ. ಅಮೋಕ್ಸಿ ಸಿಲಿಂಗ್ ನೈಜ ದರ 11 ರೂ. 75 ಪೈಸೆಯಾಗಿದೆ. ಆದರೆ, 23 ರೂ. ಎಂದು ನಮೂದಿಸಲಾಗಿದೆ. ಅದೇ ರೀತಿ, ಅನೇಕ ಔಷಧಗಳಿಗೆ ಹೆಚ್ಚು ಬೆಲೆ ನೀಡಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಹಗಲು ದರೋಡೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಎನ್ಎಚ್ಎಂನಲ್ಲಿ ಅಗತ್ಯವಿರುವ ತಜ್ಞ ವೈದ್ಯರು, ನರ್ಸ್ಗಳು, ಆಯಾಗಳು, ತಂತ್ರಜ್ಞರ ನೇಮಕಾತಿ ಹೆಸರಿನಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಶೇ.75ರಷ್ಟು ಸುಳ್ಳು ಮಾಹಿತಿಯನ್ನು ನೀಡಿ ನೇಮಕವೇ ಆಗದ, ಕರ್ತವ್ಯ ನಿರ್ವಹಿಸದೇ ಇರುವ ವೈದ್ಯರು, ಅಧಿಕಾರಿ, ನೌಕರರಿಗೆ ವೇತನ ಭತ್ತೆ ಸೃಷ್ಟಿಸಿ ನಕಲಿ ದಾಖಲೆಗಳಿಂದ ಪ್ರತಿ ತಿಂಗಳು ಕೋಟ್ಯಂತರ ರೂ. ನುಂಗಿ ಹಾಕುತ್ತಿದ್ದಾರೆ. ಅಲ್ಲದೆ ಆಸ್ಪತ್ರೆ ಕಟ್ಟಡಗಳ ನವೀಕರಣ, ಉನ್ನತೀಕರಣ, ಕಚೇರಿಗಳ ಖರ್ಚು-ವೆಚ್ಚಗಳು, ವೈದ್ಯಕೀಯ ಶಿಬಿರ ಮುಂತಾದವುಗಳ ಹೆಸರುಗಳಲ್ಲೂ ಕೂಡ ಕೋಟ್ಯಂತರ ರೂ.ವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೂ ದೂರು: ಔಷಧಿ ಪೂರೈಕೆ ಬಹುಕೋಟಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಪ್ರಮುಖ ಸಚಿವರು ಭಾಗಿಯಾಗಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಲಾಗಿದೆ. ಜೊತೆಗೆ ಪ್ರಧಾನಿ ಅವರಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದು, ಕೇಂದ್ರ ಕಾನೂನು ಸಚಿವರಿಗೆ ಪ್ರಕರಣದ ಅನ್ವಯ ಮಾಹಿತಿ ರವಾನಿಸಲಾಗಿದೆ.
-ಎನ್.ಆರ್.ರಮೇಶ್, ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕ
ಯಾವುದೇ ತನಿಖೆಗೂ ಸಿದ್ಧ:
ಆರೋಗ್ಯ ಸಚಿವ ಯು.ಟಿ.ಖಾದರ್
ಬೆಂಗಳೂರು, ಮೇ 20: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಬಿಡುಗಡೆಯಾಗುವ ಹಣ ದುರ್ಬಳಕೆಗೆ ಅವಕಾಶವಿಲ್ಲ. ಹೀಗಿದ್ದರೂ, ಬಿಜೆಪಿ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದು, ತಾವು ಯಾವುದೇ ತನಿಖೆಗೆ ಸಿದ್ಧ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಿಸಿದ್ದಾರೆ. ಶುಕ್ರವಾರ ‘ವಾರ್ತಾ ಭಾರತಿ’ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ವಿಭಾಗಕ್ಕೂ ರಾಜ್ಯ ಆರೋಗ್ಯ ಇಲಾಖೆಗೂ ಸಂಬಂಧವಿಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಗೆ ಸರಕಾರ ಹಣವನ್ನು ನೀಡುತ್ತದೆ. ಆದರೆ, ಯಾವುದೇ ಸಂದರ್ಭದಲ್ಲಿಯೂ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಔಷಧ ಖರೀದಿಯಲ್ಲಿ 1,400 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಅವ್ಯವಹಾರ ಸಾಧ್ಯವಿಲ್ಲ. ಪ್ರಸಕ್ತ ಸಾಲಿನಲ್ಲಿ ಔಷಧ ಖರೀದಿಗೆ ಕೇವಲ 66ಕೋಟಿ ರೂ.ಗಳನ್ನಿಟ್ಟಿದ್ದು, 9ಕೋಟಿ ರೂ.ಮೊತ್ತದ ಔಷಧ ಖರೀದಿಗೆ ಇನ್ನೂ ಟೆಂಡರ್ ಆಗಿಲ್ಲ ಎಂದು ಸ್ಪಷ್ಟಣೆ ನೀಡಿದರು. ಔಷಧ ಖರೀದಿಗೆ ಮೂರು ಹಂತದ ಸಮಿತಿಗಳಿದ್ದು, ತಾವು ಅಥವಾ ಮುಖ್ಯಮಂತ್ರಿ ಅದರಲ್ಲಿ ಮಧ್ಯ ಪ್ರವೇಶಕ್ಕೆ ಅವಕಾಶವೇ ಇಲ್ಲ. ಹೀಗಿರುವಾಗ ಅವ್ಯವಹಾರ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಆಧಾರ ರಹಿತ, ರಾಜಕೀಯ ಪ್ರೇರಿತ ಹೇಳಿಕೆ ರಾಜಕೀಯ ಪಕ್ಷಗಳಿಗೆ ಶೋಭೆ ತರುವುದಿಲ್ಲ ಎಂದು ಖಾದರ್ ತಿರುಗೇಟು ನೀಡಿದರು.
ರಾಜ್ಯದ ಜನತೆ ಯಾವುದೇ ಸಂದರ್ಭದಲ್ಲಿಯೂ ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಅವ್ಯವಹಾರದ ಬಗ್ಗೆ ಖಚಿತ ದಾಖಲೆಗಳಿದ್ದರೆ ತಮ್ಮ ಗಮನಕ್ಕೆ ತಂದರೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧ ಎಂದು ಖಾದರ್ ಹೇಳಿದರು.