ಬಿಜೆಪಿಯಿಂದ ಸುಳ್ಳಾರೋಪ ಹೊರಿಸಿ ವರ್ಚಸ್ಸು ಪಡೆಯುವ ವ್ಯರ್ಥ ಪ್ರಯತ್ನ: ಈಶ್ವರ್ ಉಳ್ಳಾಲ್

Update: 2016-05-24 13:24 GMT

ಉಳ್ಳಾಲ, ಮೇ 24: ತನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಈಗಾಗಲೇ ಸಚಿವ ಖಾದರ್ ಹೇಳಿದ್ದಾರೆ. ಉಳ್ಳಾಲದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ನಂ. 1 ಸಚಿವರ ವರ್ಚಸ್ಸು ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದೆ. ಉಳ್ಳಾಲದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲದಿದ್ದರೂ ಈ ರೀತಿಯ ಸುಳ್ಳಾರೋಪ ಹೊರಿಸಿ ವರ್ಚಸ್ಸು ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಆದರೆ ಖಾದರ್ ಜನಮನದಲ್ಲಿದ್ದು, ಬಿಜೆಪಿ ಕೇವಲ ಪ್ರತಿಭಟನೆ, ಸುದ್ದಿಗೋಷ್ಠಿಗೆ ಮಾತ್ರ ಸೀಮಿತ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ತೊಕ್ಕೊಟ್ಟಿನಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸೋಮವಾರ ಬಿಜೆಪಿ ನಡೆಸಿರುವ ಪ್ರತಿಭಟನೆಯಲ್ಲಿ ಯು.ಟಿ.ಖಾದರ್‌ರ ಸಹೋದರ ಇಫ್ತಿಕಾರ್‌ರನ್ನು ಮಂಪರು ಪರೀಕ್ಷೆ ಮಾಡಬೇಕು ಎಂದು ಹೇಳಿರುವ ರಹೀಂ ಉಚ್ಚಿಲ್‌ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಬ್ಯಾರಿ ಸಾಹಿತ್ಯ ಅಕಾಡಮಿಯಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭ ಮಾಡಿದ ಹಗರಣ ಬೆಳಕಿಗೆ ಬರಬಹುದು ಎಂದು ಹೇಳಿದರು. ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಸುಲೋಚನಾ ಭಟ್, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಅದೇ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ನೀಲಿಚಿತ್ರ ವೀಕ್ಷಿಸಿದಾಗ ರಾಜಿನಾಮೆ ಕೇಳದಿದ್ದರೂ, ತೊಕ್ಕೊಟ್ಟಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಖಾದರ್‌ರ ರಾಜಿನಾಮೆ ಕೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಮುಖ್ಯಮಂತ್ರಿ, ಸಚಿವರು, ಜೈಲಿಗೆ ಹೋಗಿ ಬಂದಿದ್ದಾರೆ.

ಸೋಮೇಶ್ವರ ಗ್ರಾಮ ಪಂಚಾಯಿತಿಯಲ್ಲಿ 9/11 ಸಂಬಂಧ ಅಧ್ಯಕ್ಷರು, ಆಡಳಿತ ವರ್ಗ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ಔಷಧ ಖರೀದಿ ಹಗರಣದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರ.ಕಾರ್ಯದರ್ಶಿಗಳಾದ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸುರೇಶ್ ಭಟ್ನಗರ, ಮುಖಂಡ ಶ್ರೀನಿವಾಸ್ ಶೆಟ್ಟಿ ಅಸೈಗೋಳಿ ಹಾಗೂ ತಾಲೂಕು ಪಂಚಾಯತ್ ಸದಸ್ಯ ಸಿದ್ದೀಕ್ ತಲಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News