ಮಂಗಳೂರು ನೆಹರೂ ಮೈದಾನದಲ್ಲಿ ಐಪಿಎಲ್ ಪ್ರಥಮ ಕ್ವಾಲಿಪೈಯರ್ ಪಂದ್ಯ ವೀಕ್ಷಿಸುವ ಅವಕಾಶ!
ಮಂಗಳೂರು, ಮೇ 24; ಬಿಸಿಸಿಐ ಪ್ರಾಯೋಜಿತ ವಿಮೋ ಐಪಿಎಲ್ ಫ್ಯಾನ್ ಪಾರ್ಕ್-2016ರ ವತಿಯಿಂದ ಕ್ರಿಕೆಟ್ ಮೈದಾನದಲ್ಲಿಯೆ ಕ್ರಿಕೆಟ್ ನೋಡುವ ಅನುಭವ ನೀಡುವ ರೀತಿಯಲ್ಲಿ ನಗರದ ನೆಹರೂ ಮೈದಾನದಲ್ಲಿ 32 18 ಅಡಿಯ ಬೃಹತ್ ಎಲ್ಇಡಿ ಪರದೆ ಮೂಲಕ ಇಂದು ಆರ್ಸಿಬಿ ಹಾಗೂ ಗುಜರಾತ್ ಲಯನ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳಿಗೆ ವ್ಯವಸ್ಥೆ ಮಾಡಲಾಯಿತು.
ದೇಶದ ಸ್ಟೇಡಿಯಂ ಇಲ್ಲದ ನಗರಗಳಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿ ಕೊಡುವ ಉದ್ದೇಶದಿಂದ ಬಿಸಿಸಿಐ ಈ ರೀತಿ ವ್ಯವಸ್ಥೆ ಮಾಡಿದೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಆಗಮಿಸಿದ್ದರು.
ಬಿಸಿಸಿಐ ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ದೇಶದ 34 ಕಡೆಗಳಲ್ಲಿ ಬೃಹತ್ ಪರದೆಯ ಮೂಲಕ ಸಾರ್ವಜನಿಕರು ವೀಕ್ಷಿಸುವ ಅವಕಾಶವನ್ನು ಮಾಡಿದ್ದು ಡಿಎನ್ಎ ನೆಟ್ವರ್ಕ್ ಪ್ರೈವೆಟ್ ಲಿಮಿಟೆಡ್ ಇದರ ಸಂಪೂರ್ಣ ಉಸ್ತುವಾರಿಯನ್ನು ವಹಿಸಿದೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಈ ವ್ಯವಸ್ಥೆಯ ಉಸ್ತುವಾರಿಯನ್ನು ಎಂಪಿಎಲ್ನ್ನು ಆಯೋಜಿಸಿದ ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿ ವಹಿಸಿದೆ.
ಇದರ ಮೇಲ್ವಿಚಾರಕರಾಗಿರುವ ಮುಹಮ್ಮದ್ ಸಿರಾಜುದ್ದೀನ್, ಇಮ್ತಿಯಾಝ್ , ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೆಶನ್ನ ಮನೋಹರ್ ಅಮೀನ್ ನಗರದಲ್ಲಿ ಈ ವ್ಯವಸ್ಥೆಯನ್ನು ಮಾಡುವಲ್ಲಿ ಮತುವರ್ಜಿ ವಹಿಸಿದ್ದರು.
ಪ್ರದರ್ಶನ ವೀಕ್ಷಣೆಗೆ ಬರುವವರನ್ನು ಆರಂಭದಲ್ಲಿ ಹೆಸರು ನೊಂದಾಯಿಸಿ ಅವರಿಗೆ ಅದೃಷ್ಟ ಚೀಟಿಯನ್ನು ನೀಡಿ ಅದರಲ್ಲಿ ವಿಜೇತರಾದ ಆರು ಮಂದಿಗೆ ಐಪಿಎಲ್ ಫೈನಲ್ ಪಂದ್ಯಾಟದ ವಿಐಪಿ ಟಿಕೇಟ್ ಉಳಿದ ವಿಜೇತರಿಗೆ ವಿವೊ ಮೊಬೈಲ್, ಸಹಿ ಮಾಡಿದ ಜೆರ್ಸಿ ಹಾಗೂ ಬ್ಯಾಟ್ ನೀಡಲಾಯಿತು.
ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಬಂದವರಿಗೆ ಮನೋರಂಜನಾ ಆಟಗಳಾದ ಬೌಲಿಂಗ್ ಮಿಷನ್, ವರ್ಚುವಲ್ ಕ್ರಿಕೆಟ್, ಫೇಸ್ ಪೈಂಟಿಂಗ್, ಇನ್ ಸ್ಟಂಟ್ ಟಾಟೂ ಬೂತ್, ಫ್ಯಾನ್ ಮಚಾಯೆ ಶೋರ್, ಕ್ವಿಝ್ ಮೊದಲಾದವುಗಳನ್ನು ಆಯೋಜಿಸಲಾಗಿತು. ಮಂಗಳೂರಿನ ವೀಕ್ಷಣೆಯ ದೃಶ್ಯಗಳನ್ನು ಕ್ರಿಕೆಟ್ನಡೆಯುವ ಸ್ಥಳ ಹಾಗೂ ಸೋನಿ ಸಿಕ್ಸ್ ಟಿವಿ ಚಾನೆಲ್ನಲ್ಲೂ ಪ್ರದರ್ಶಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು.
ಮಂಗಳೂರಿನಲ್ಲಿ ಇಷ್ಟರತನಕ ಈ ರೀತಿ ಬೃಹತ್ ಪರದೆಯಲ್ಲಿ ಐಪಿಎಲ್ ಪಂದ್ಯಾವಳಿಯನ್ನು ವೀಕ್ಷಿಸುವ ವ್ಯವಸ್ಥೆ ಆಗಿರಲಿಲ್ಲ. ಕ್ರಿಕೆಟ್ ಜನರಿಗೆ ಮುಟ್ಟುತ್ತಿಲ್ಲ ಎಂಬ ಕೊರಗು ಇತ್ತು. ಈ ರೀತಿಯ ವ್ಯವಸ್ಥೆಯಿಂದ ಜನರನ್ನು ಕ್ರಿಕೆಟ್ ಗೆ ಹತ್ತಿರ ಮಾಡಲು ಸಾಧ್ಯವಾಗುತ್ತದೆ.
ಮುಹಮ್ಮದ್ ಸಿರಾಜುದ್ದೀನ್, ಆಯೋಜಕರು
ಮಂಗಳೂರಿನ ಜನರಿಗೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇರುವ ಅನುಭವ ನೀಡುವಂತೆ ಇಲ್ಲಿ ವ್ಯವಸ್ಥೆ ಮಾಡಿರುವುದು ಖುಷಿ ಕೊಟ್ಟಿತು. ನಾವು ಕುಟುಂಬ ಸಮೇತ ಬಂದಿದ್ದು ದೊಡ್ಡವರು ಕ್ರಿಕೆಟ್ ನೋಡುತ್ತಿದ್ದರೆ ಮಕ್ಕಳು ಮನೋರಂಜನಾ ಆಟವನ್ನು ಆಡುತ್ತಿದ್ದಾರೆ.
ದಾಮೋದರ್ ಶೆಟ್ಟಿ, ದೇರೆಬೈಲ್ ಕೊಂಚಾಡಿ ನಿವಾಸಿ