​ಪುತ್ತೂರು: ಬಿಜೆಪಿ ಜಾಹೀರಾತಿನಲ್ಲಿ ಕಾಂಗ್ರೆಸ್ ಶಾಸಕರ ಹೆಸರು

Update: 2016-05-26 15:18 GMT

ಪುತ್ತೂರು, ಮೇ 26: ಭಾರತೀಯ ಜನತಾ ಪಾರ್ಟಿ ನೀಡಿದ ಪತ್ರಿಕಾ ಜಾಹೀರಾತಿನಲ್ಲಿ ಪುತ್ತೂರಿನ ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯೆ ಪುತ್ತೂರು ನಗರಸಭಾ ಅಧ್ಯಕ್ಷರ ಹೆಸರು ಬಳಸಲಾಗಿದೆ. ಇದು ಖಂಡನೀಯ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಎರಡನೆ ವರ್ಷದ ಸಾಧನೆ ಕುರಿತು ಮಾಹಿತಿ ನೀಡಲು ಪುತ್ತೂರು ಪುರಭವನದಲ್ಲಿ ಭಾರತ ಸರಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಗುರುವಾರ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಂಸದರು, ಜಿಪಂ ಅಧ್ಯಕ್ಷರು, ತಾಪಂ ಅಧ್ಯಕ್ಷರು, ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರು, ಶಾಸಕರು ಮುಂತಾದವರು ಆಮಂತ್ರಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕರು ಮತ್ತು ನಗರಸಭಾ ಅಧ್ಯಕ್ಷರು (ಇವರಿಬ್ಬರೂ ಕಾಂಗ್ರೆಸಿಗರು) ಗೈರು ಹಾಜರಾಗಿದ್ದರು.

ಈ ನಡುವೆ, ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕ್ರಮದ ಬಗ್ಗೆ ಬಿಜೆಪಿ ವತಿಯಿಂದ ಪತ್ರಿಕಾ ಜಾಹೀರಾತು ನೀಡಿದ್ದು, ಅದರಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್‌ನ ನಗರಸಭಾ ಅಧ್ಯಕ್ಷರ ಹೆಸರು ಮುದ್ರಿಸಲಾಗಿದೆ. ಇದು ಖಂಡನೀಯ. ಸರಕಾರಿ ಕಾರ್ಯಕ್ರಮವನ್ನು ಬಿಜೆಪಿ ತನ್ನ ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದೆ. ಜೊತೆಗೆ ಇದಕ್ಕಾಗಿ ವಾರ್ತಾ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜನತೆಗೆ ತಪ್ಪು ಮಾಹಿತಿ ನೀಡಲಾಗಿದೆ. ದ.ಕ. ಜಿಲ್ಲೆ ಮತ್ತು ಪುತ್ತೂರು ತಾಲೂಕಿನಲ್ಲಿ ಬಿಜೆಪಿಯಲ್ಲಿ ನಾಯಕರಿಲ್ಲದೆ ಪಕ್ಷ ದಿವಾಳಿಯತ್ತ ಸಾಗುತ್ತಿರುವ ಸೂಚನೆ ಇದಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News