ಸ್ಕೂಟರ್ಗೆ ಟ್ಯಾಂಕರ್ ಢಿಕ್ಕಿ: ಸಹ ಸವಾರ ಮೃತ್ಯು
ಮಂಗಳೂರು, ಮೇ 26: ಗ್ಯಾಸ್ ಟ್ಯಾಂಕರ್ವೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಇಂದು ನಗರದ ಎಕ್ಕೂರಿನ ಬಳಿ ನಡೆದಿದೆ.
ಬೆಂಜನಪದವು ಕಲ್ಪನೆ ನಿವಾಸಿ ಲಿಖಿತ್ ಕುಮಾರ್ (16) ಮೃತ ಬಾಲಕ. ಜೆಪ್ಪು ಕುಡ್ಪಾಡಿ ನಿವಾಸಿ ಸ್ನೇಹಿತ ತರುಣ್ ರಾಜ್ ಜೊತೆ ಲಿಖಿತ್ ಹಿಂಬದಿ ಸವಾರನಾಗಿ ಸ್ಕೂಟರ್ನಲ್ಲಿ ಇಂದು ಬೆಳಗ್ಗೆ ಪಂಪ್ವೆಲ್ನಿಂದ ತೊಕ್ಕೊಟ್ಟು ಕಡೆಗೆ ಹೊರಟಿದ್ದ. ದಾರಿಮಧ್ಯೆ ಎಕ್ಕೂರಿನಲ್ಲಿ ಗ್ಯಾಸ್ ಟ್ಯಾಂಕರ್ ಇವರ ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ತರುಣ್ ಹಾಗೂ ಲಿಖಿತ್ ಕುಮಾರ್ ರಸ್ತೆಗಪ್ಪಳಿಸಿದ್ದು, ಪರಿಣಾಮವಾಗಿ ಲಿಖಿತ್ ಕುಮಾರ್ನ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಕೂಡಲೇ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಪ್ರದವಾಗದೆ ಲಿಖಿತ್ ಕುಮಾರ್ ಮಧ್ಯಾಹ್ನ ಸಾವನ್ನಪ್ಪಿದ್ದಾನೆ. ಸ್ಕೂಟರ್ ಸವಾರ ತರುಣ್ ರಾಜ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ಯಾಸ್ ಟ್ಯಾಂಕರ್ ಚಾಲಕನನ್ನು ಸಂಚಾರಿ ಪೂರ್ವ ಠಾಣಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.