ಕಾರ್ಕಳ ತಹಶೀಲ್ದಾರ್‌ರಿಂದ ಶ್ಲಾಘನೀಯ ಕೆಲಸ: ಪ್ರಮೋದ್ ಮಧ್ವರಾಜ್

Update: 2016-05-27 13:51 GMT

ಕಾರ್ಕಳ, ಮೇ 27: ಹಳೆಯ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ಕಾರ್ಕಳ ತಹಶೀಲ್ದಾರ್ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ ಎಂದು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಶುಕ್ರವಾರ ತಾಲೂಕು ಕಚೇರಿಗೆ ಭೇಟಿ ನೀಡಿ, ಕಂದಾಯ ಇಲಾಖೆಗಳ ಕಾರ್ಯವನ್ನು ಪರಿಶೀಲನೆ ನಡೆಸಿದರು.

ನಾನು ಕಾರ್ಕಳಕ್ಕೆ ಬರಬೇಕಾಗಿರಲಿಲ್ಲ. ಎಲ್ಲಿ ತಾಲೂಕು ಕಚೇರಿಗಳಲ್ಲಿ ಕಡತಗಳ ವಿಲೇವಾರಿ ಸಮರ್ಪಕವಾಗದೆ, ಜನತೆ ತೊಂದರೆ ಅನುಭವಿಸುತ್ತಿದ್ದಾರೋ ಅಲ್ಲಿಗೆ ನಾನು ತೆರಳಬೇಕಾಗಿತ್ತು. ಆದರೆ ದಿಢೀರ್ ಕಾರ್ಕಳಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ತಹಶೀಲ್ದಾರ್‌ರ ಕಾರ್ಯವೈಖರಿ ಮೆಚ್ಚುವಂತದ್ದು. ಹಳೆಯ ಕಡತಗಳು ಸಮರ್ಪಕವಾಗಿ ವಿಲೇವಾರಿಯಾಗುತ್ತಿರುವುದನ್ನು ಗಮನಿಸಿದ್ದೇನೆ ಎಂದು ಈ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು.

94ಸಿ ಅರ್ಜಿ

94 ಸಿ ಮತ್ತು 94ಸಿಸಿ ಅಡಿ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಜಾಗವನ್ನು ಮಂಜೂರು ಮಾಡುವ ಅಧಿಕಾರವಿರುವುದಿಲ್ಲ. ಬದಲಿಗೆ ವಾಸ್ತವ್ಯದ ಮನೆ ಅಡಿಯಲ್ಲಿರುವ ಜಾಗವನ್ನು ಸಕ್ರಮಗೊಳಿಸಲಾಗುತ್ತದೆ. ಅಂಗಳ, ಬಾವಿ ಅದರ ವ್ಯಾಪ್ತಿಗೊಳಪಡುವುದಿಲ್ಲ. ಮನೆಯ ಅಡಿ ಜಾಗ 9 ಸೆಂಟ್ಸ್‌ನಷ್ಟು ಮಂಜೂರು ಮಾಡುವ ಅಧಿಕಾರವಿದೆ. ಈಗಾಗಲೇ 94ಸಿ ಮತ್ತು 94ಸಿಸಿ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳ ಪೈಕಿ ಕುಮ್ಕಿ, ಡೀಮ್ಡ್ ಫಾರೆಸ್ಟ್, ಪರಂಬೊಕು ಮತ್ತು ಗೋಮಾಳದಲ್ಲಿರುವ ಅರ್ಜಿಗಳ ವಿಲೇವಾರಿ ಸಾಧ್ಯವಾಗದು. ಆ ಅರ್ಜಿಗಳನ್ನು ಬಾಕಿಯಿರಿಸಿ ಸರಕಾರಿ ಭೂಮಿಯಲ್ಲಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿದ್ದವರ ಪೈಕಿ ಅರ್ಹತೆಯಿದ್ದ ಅರ್ಜಿಗಳನ್ನು ಮಾತ್ರ ಬೈಠಕ್‌ನಲ್ಲಿಟ್ಟು ಮಂಜೂರು ಮಾಡಿ. ಬಾಕಿ ಉಳಿದ ಅರ್ಜಿಗಳನ್ನು ತಿರಸ್ಕರಿಸದೆ ಮುಂದಿನ ದಿನಗಳಲ್ಲಿ ಅವುಗಳ ವಿಲೇವಾರಿಗೆ ಕಾನೂನು ತಿದ್ದುಪಡಿಯಾದ ಸಂದರ್ಭ ಅವಕಾಶ ಕಲ್ಪಿಸಿಕೊಡಿ ಎಂದರು.

ಸರ್ವೇ ವಿಭಾಗದ ಮೇಲೆ ಅಸಮಾಧಾನ

ಸರ್ವೇ ವಿಭಾಗದಲ್ಲಿ ಭಾರೀ ದೂರುಗಳಿವೆ. ಜನತೆ ನಿಮ್ಮನ್ನು ದೂರುತ್ತಿದ್ದಾರೆ. ಕೆಲಸ ಬಾಕಿಯಿರಿಸಿಕೊಳ್ಳದೆ ಜನತೆಗೆ ಸಮರ್ಪಕ ನ್ಯಾಯ ಕೊಡಿ ಎಂದು ಪ್ರಮೋದ್ ಮಧ್ವರಾಜ್ ಸೂಚಿಸಿದರು. ಬಳಿಕ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಭಾಗಗಳಿಗೆ ತೆರಳಿ ಕಡತಗಳನ್ನು ಪರಿಶೀಲನೆ ನಡೆಸಿದರು.

ಕ್ಷೇತ್ರ ತಹಶೀಲ್ದಾರ್ ಎಸ್.ರಾಘವೇಂದ್ರ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭ ಎಡಿಸಿ ಅನುರಾಧ, ಕಾಂಗ್ರೆಸ್ ಮುಖಂಡರಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ ಎನ್.ಕೋಟ್ಯಾನ್, ಸುಭಿತ್ ಎನ್.ಆರ್, ಶುಭದ ರಾವ್, ವಿವೇಕಾನಂದ ಶೆಣೈ, ಸುಧಾಕರ ಶೆಟ್ಟಿ ಮುಡಾರು, ಸಂತೋಷ್ ಶೆಟ್ಟಿ ಹಿರ್ಗಾನ, ಅಜಿತ್ ಹೆಗ್ಡೆ ಮಾಳ, ಪ್ರಭಾಕರ ಬಂಗೇರ, ತಾರನಾಥ ಶೆಟ್ಟಿ ಹಿರ್ಗಾನ, ಮಾಲಿನಿ ರೈ ಸಾಣೂರು, ನಳಿನಿ ಆಚಾರ್ಯ ಕಾರ್ಕಳ, ಸಹೀಂ ಅಯ್ಯಪ್ಪ ನಗರ ಮತ್ತಿತರರು ಜತೆಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News