×
Ad

92 ಕೋಟಿ ರೂ. ವೆಚ್ಚದಲ್ಲಿ ಬೀಚ್‌ಗಳ ಅಭಿವೃದ್ಧಿ: ಸಚಿವ ದೇಶಪಾಂಡೆ

Update: 2016-05-27 20:41 IST

ಮಂಗಳೂರು, ಮೇ 26: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ 9 ಭಾಗಗಳಲ್ಲಿರುವ ಬೀಚ್‌ಗಳನ್ನು 92 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
 
ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆನರಾ ಸರ್ಫಿಂಗ್ ಆ್ಯಂಡ್‌ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಮಂತ್ರ ಸರ್ ಕ್ಲಬ್ ಏರ್ಪಡಿಸಿದ್ದ ಸಫಿರ್ಂಗ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕರಾವಳಿಯ 9 ಬೀಚ್‌ಗಳ ಅಭಿವೃದ್ಧಿ, ಮೂಲಭೂತ ಸೌಕರ್ಯ, ಭದ್ರತೆ ವ್ಯವಸ್ಥೆ ಕಲ್ಪಿಸಲು 92 ಕೋಟಿ ರೂ. ಶಿಾರಸುಗೊಂಡಿದ್ದು, ತ್ರಾಸಿ, ಸುರತ್ಕಲ್, ಮಲ್ಪೆ, ಮರವಂತೆ, ಮಾವಿನಕುರ್ವೆ, ಮುರ್ಡೇಶ್ವರ ಮೊದಲಾದ ಬೀಚ್‌ಗಳು ಪ್ರಸ್ತಾವನೆಯಲ್ಲಿವೆ ಎಂದರು.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸರ್ಫಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಮಂಗಳೂರಿನಲ್ಲಿ ಸ್ಪರ್ಧೆಗೆ ಉತ್ತಮ ಅವಕಾಶವಿದ್ದು, ದೇಶ, ವಿದೇಶಗಳಿಂದ ಸ್ಪರ್ಧೆಗೆ ಆಗಮಿಸುವ ಮುಖಾಂತರ ಬೃಹತ್ ಉತ್ಸವವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ ಕರಾವಳಿ ಪ್ರದೇಶಗಳಲ್ಲಿ ಸಿಆರ್‌ಝೆಡ್ ನಿಯಮಗಳು ತಡೆಯಾಗಿದ್ದು ನಿಯಮಗಳ ಸರಳೀಕರಣವಾದರೆ ಪ್ರವಾಸೋದ್ಯಮವನ್ನು ಇಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಬಹುದು. ಪ್ರವಾಸೋದ್ಯಮದ ಅಭಿವೃದ್ದಿಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎಂದರು.

ಕರಾವಳಿ ಉತ್ಸವಗಳಿಗೆ ದಿನ ನಿಗದಿಗೆ ಸೂಚನೆ

ಸರ್ಫಿಂಗ್ ಸ್ಪರ್ಧೆ ಸಹಿತ ಜಿಲ್ಲೆಯಲ್ಲಿ ನಡೆಯುವ ಕರಾವಳಿಯ ವಾರ್ಷಿಕ ಉತ್ಸವಗಳಿಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಗೊಳಿಸಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಇದೇ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಪ್ರತೀ ವರ್ಷ ನಡೆಯುವ ಕರಾವಳಿ ಉತ್ಸವ, ಬೀಚ್ ಉತ್ಸವ , ಸರ್ಫಿಂಗ್ ಉತ್ಸವ ಸಹಿತ ಕರಾವಳಿಯ ಎಲ್ಲಾ ಉತ್ಸವಗಳ ದಿನಾಂಕವನ್ನು ನಿಗದಿಗೊಳಿಸುವಂತೆ ಸೂಚಿಸಿದರು. ಇಂತಹ ಮಾಹಿತಿಗಳನ್ನು ಅದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ಹಾಕಿ ಜಗತ್ತಿನ ಮೂಲೆಗಳಿಗೆ ತಲುಪಿಸುವ ಮೂಲಕ ದೇಶ, ವಿದೇಶಗಳು ಜನರು ಉತ್ಸವಕ್ಕೆ ಹಾಜರಾಗಲು ಸಾಧ್ಯವಾಗುತ್ತದೆ. ಸರ್ಫಿಂಗ್ ಸ್ಪರ್ಧೆಗೂ ನಿರ್ದಿಷ್ಟ ದಿನವನ್ನು ನಿಗದಿಗೊಳಿಸಿ ವಾರ್ಷಿಕ ಉತ್ಸವನ್ನಾಗಿ ಆಚರಿಸುವ ಮುಖಾಂತರ ವಿಶ್ವಾದ್ಯಂತದಿಂದ ಸ್ಪರ್ಧಿಗಳನ್ನು ಆಕರ್ಷಿತರಾಗುವಂತೆ ಮಾಡಬಹುದು ಎಂದು ಸಚಿವರು ತಿಳಿಸಿದರು.

ಸಚಿವ ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಐವನ್‌ಡಿಸೋಜ, ಶಾಸಕ ಮೊದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಮಹಾನಗರ ಪಾಲಿಕೆಯ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News