ಪಹಣಿ ದೋಷ ಸರಿಪಡಿಸಲು ಸೆ.30ರವರೆಗೆ ಅವಕಾಶ: ಪ್ರಮೋದ್
ಮಣಿಪಾಲ, ಮೇ 27: ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ಬೇಡಿಕೆಯಂತೆ ತಹಶೀಲ್ದಾರ್ಗೆ ಅಧಿಕಾರ ನೀಡಿ ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕಾಲಾವಧಿಯನ್ನು ಮುಂದಿನ ಸೆಪ್ಟಂಬರ್ ತಿಂಗಳ 30ರವರೆಗೆ ವಿಸ್ತರಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ, ವಿವಿಧ ವಿಷಯಗಳ ಕುರಿತು ಪರಾಮರ್ಶೆಯನ್ನು ನಡೆಸಿದ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಪಹಣಿ ಪತ್ರದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರ್ಗೆ ನೀಡಿದ್ದು ಮಾತ್ರವಲ್ಲದೇ, ಈ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯದಾದ್ಯಂತ ಕಂದಾಯ ಅದಾಲತ್ಗಳನ್ನು ನಡೆಸಲಾಗಿದೆ. ಈ ಅವಧಿ ಇದೇ ವರ್ಷದ ಮಾ.31ಕ್ಕೆ ಮುಕ್ತಾಯಗೊಂಡಿತ್ತು ಎಂದವರು ಹೇಳಿದರು.
ತಾನು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಂದಾಯ ಅದಾಲತ್ಗಳನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಿ ಬಾಕಿ ಉಳಿದ ಪಹಣಿ ಲೋಪದೋಷಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳು ಮಾಡಿಕೊಂಡ ಮನವಿಯಂತೆ ಕಂದಾಯ ಸಚಿವರಿಗೆ ಮನವಿ ಮಾಡಿ ಕೊಂಡಿದ್ದು, ಪ್ರಸ್ತಾಪವನ್ನು ಒಪ್ಪಿ ಸರಕಾರಿ ಆದೇಶ ಹೊರಬಿದ್ದಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಹಳೆಯ ಕಡತಗಳನ್ನು ವಿಲೇವಾರಿ ಮಾಡುವ ಪ್ರಯತ್ನಕ್ಕೆ ತಾವು ಮುಂದಾಗಿದ್ದು, ಇದಕ್ಕಾಗಿ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇನೆ. ಈಗಾಗಲೇ ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಜೂ.3-4ರಂದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ 6ರಂದು ಕುಂದಾಪುರ ತಾಲೂಕು ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದರು.
ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕು ಕಚೇರಿಗಳಲ್ಲಿ ಎರಡು ವರ್ಷ ಮೇಲ್ಪಟ್ಟು ಸಾಕಷ್ಟು ಕಡತಗಳು ಬಾಕಿ ಉಳಿದಿರುವುದು ಕಂಡುಬಂದಿದ್ದು, ಅವುಗಳನ್ನು ವಿಂಗಡಿಸಿ ನಿರ್ದಿಷ್ಟ ಕಾಲಾವಧಿಯಲ್ಲಿ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವುಗಳಲ್ಲಿ ಎಲ್ಎನ್ಡಿ, ಪಹಣಿ ಪತ್ರ, ಎನ್ಆರ್ಎಫ್ ಹಾಗೂ ಸರ್ವೇ ಬಾಕಿ ಕಡತಗಳನ್ನು ಸೇರಿವೆ. ಮೂರು ತಿಂಗಳು, ಆರು ತಿಂಗಳ ಅವಧಿಯಲ್ಲಿ ಈ ಎಲ್ಲಾ ಬಾಕಿ ಕಡತಗಳನ್ನು ಇತ್ಯರ್ಥಪಡಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದವರು ಹೇಳಿದರು.
ಇವುಗಳಲ್ಲಿ ಕಾರ್ಕಳ ತಾಲೂಕು ಕಚೇರಿಯಲ್ಲಿ ಅತೀ ಕಡಿಮೆ ಕಡತಗಳು ಬಾಕಿ ಉಳಿದಿವೆ. ಅಲ್ಲಿನ ತಹಶೀಲ್ದಾರರು ಉತ್ತಮವಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಈ ಎಲ್ಲಾ ಕಾರ್ಯವನ್ನು ಸಹಾಯಕ ವಿಭಾಗಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಯವರು ಅವಲೋಕಿಸಲಿದ್ದಾರೆ ಎಂದು ಪ್ರಮೋದ್ ತಿಳಿಸಿದರು.
ಭೂಮಿ, ಪೋಡಿ ಇಂಡೀಕರಣ ಹಂತದಲ್ಲಿ 739 ಕೇಸುಗಳು ಬಾಕಿ ಇದ್ದು, ಎಲ್ಲಾ ತಾಲೂಕುಗಳಲ್ಲಿ ಇವುಗಳನ್ನು ಒಂದು ವಾರದಲ್ಲಿ ಇತ್ಯರ್ಥ ಪಡಿಸಲು ಸೂಚಿಸಲಾಗಿದೆ. ಅದೇ ರೀತಿ ಎಡಿಎಲ್ಆರ್ ಸಹಿಗಾಗಿ 620 ಕೇಸುಗಳಿದ್ದು ಇವುಗಳನ್ನು 15 ದಿನದೊಳಗೆ ಮಂಜೂರು ಮಾಡಬೇಕಾಗಿದೆ ಎಂದರು. ಪೋಡಿ ಮುಕ್ತ ಗ್ರಾಮಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದರಂತೆ ಒಟ್ಟು 25 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 16 ಗ್ರಾಮಗಳ ಕಾರ್ಯ ಮುಕ್ತಾಗೊಂಡಿದೆ. ಒಟ್ಟು 11,990 ಪಹಣಿಗಳು ಇಂಡೀಕರಣಗೊಂಡಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 572 ಕಂದಾಯ ಅದಾಲತ್ನ್ನು ನಡೆಸಲಾಗಿದ್ದು ಇಲ್ಲಿ 29,726 ಅರ್ಜಿಗಳನ್ನು ಸ್ವೀಕರಿಸಿ, 29,723ನ್ನು ಇತ್ಯರ್ಥ ಪಡಿಸಲಾಗಿದೆ. ಭೂಮಿಗೆ ಸೇರಿದ 1669 ಅರ್ಜಿಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಮೂರು ತಾಲೂಕುಗಳ ಭೂನ್ಯಾಯ ಮಂಡಳಿಯಲ್ಲಿ 11,136 ಅರ್ಜಿಗಳು ಕಳೆದ 16 ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇವೆ. ಈ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವುದು ಅಗತ್ಯವಾಗಿದ್ದು ಇದಕ್ಕಾಗಿ ಇನ್ನೊಂದು ಮಂಡಳಿಯ ಸ್ಥಾಪನೆ ಕೂಡಾ ಮಾಡಬಹುದು ಎಂದವರು ಹೇಳಿದರು.
ಅರ್ಜಿ ಸಲ್ಲಿಕೆ
ಗ್ರಾಮೀಣ ಭಾಗದಲ್ಲಿ 94ಸಿ ಅಡಿ ಅರ್ಜಿ ಸಲ್ಲಿಸಲು ಆ.4 ಕೊನೆಯ ದಿನವಾಗಿದ್ದು, ನಗರ ಪ್ರದೇಶದ 94ಸಿಸಿ ಅರ್ಜಿ ಸಲ್ಲಿಕೆಗೆ ಆ.27 ಕೊನೆಯ ದಿನವಾಗಿರುತ್ತದೆ ಎಂದರು. ಜಿಲ್ಲಾ ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಸಕಾಲದಲ್ಲಿ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನ, ಭೂಮಿಯಲ್ಲಿ 2ನೇ ಸ್ಥಾನ, ಅಟಲ್ ನೆಮ್ಮದಿ ಕೇಂದ್ರದಲ್ಲಿ ಮೊದಲ ಸ್ಥಾನ, ಪರವಾನಿಗೆ ಭೂಮಾಪಕರ ಸಾಧನೆಯಲ್ಲಿ ಮೊದಲ ಸ್ಥಾನ ಹಾಗೂ ಸರಕಾರಿ ಭೂಮಾಪಕರ ಸಾಧನೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ ಎಂದು ಪ್ರಮೋದ್ ಹೇಳಿದರು.
ಬಜೆಟ್ನಲ್ಲಿ ಘೋಷಿಸಿದಂತೆ ಗ್ರಾಮ ಸಹಾಯಕರ ವೇತನವನ್ನು 7,000ರೂ.ನಿಂದ 10,000ರೂ.ಗೆ ಏರಿಸಿದ್ದು, ಅವರಿಗೆ ಸಂಬಳವನ್ನು ಕ್ರಮಬದ್ಧವಾಗಿ ನೀಡುವಂತೆ ಸೂಚಿಸಿರುವುದಾಗಿ ಶಾಸಕರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಹಾಗೂ ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.
30,000 ಎಕರೆ ಡೀಮ್ಡ್ ಫಾರೆಸ್ಟ್
ಜಿಲ್ಲೆಯಲ್ಲಿ ಒಟ್ಟು 9.5 ಲಕ್ಷ ಎಕರೆ ಪ್ರದೇಶದಲ್ಲಿ 1.75 ಲಕ್ಷ ಎಕರೆ ಪ್ರದೇಶ ಡೀಮ್ಡ್ ಫಾರೆಸ್ಟ್ ಆಗಿ ಗುರುತಿಸಿಕೊಂಡಿತ್ತು. ಇದೀಗ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆಯ ಬಳಿಕ ವಿವಿಧ ಕಾರಣಗಳಿಗಾಗಿ 1.45 ಲಕ್ಷ ಎಕರೆ ಪ್ರದೇಶವನ್ನು ಇದರ ವ್ಯಾಪ್ತಿಯಿಂದ ಹೊರಗಿಟ್ಟು ಕೇವಲ 30,000 ಎಕರೆ ಪ್ರದೇಶವನ್ನು ಮಾತ್ರ ಡೀಮ್ಡ್ ಫಾರೆಸ್ಟ್ ಆಗಿ ಗುರುತಿಸಲಾಗಿದೆ ಎಂದರು.