ಜೂ.2ರಂದು ಉಜ್ರುಪಾದೆಯಲ್ಲಿ ಅನುಸ್ಮರಣೆ, ದಫ್ ಸ್ಪರ್ಧೆ
ಪುತ್ತೂರು, ಮೇ 31: ಪುತ್ತೂರು ತಾಲೂಕಿನ ಬಲ್ನಾಡು ಉಜ್ರುಪಾದೆ ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ಎಸ್ಕೆಎಸ್ಸೆಸ್ಸೆಫ್ನ ಜಂಟಿ ಆಶ್ರಯದಲ್ಲಿ ತಕಿಯುದ್ದೀನ್ ಕೋಯಕುಟ್ಟಿ ಉಸ್ತಾದ್ ಅನುಸ್ಮರಣೆ, ಎಸ್ಕೆಎಸ್ಸೆಸ್ಸೆಫ್ನ ನೂತನ ಕಚೇರಿ ಉದ್ಘಾಟನೆ ಜೂನ್ 2ರಂದು ಬಲ್ನಾಡು ಶಂಸುಲ್ ಉಲಮಾ ನಗರದ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಉಜ್ರುಪಾದೆ ಎಸ್ಕೆಎಸ್ಸೆಸ್ಸೆಫ್ ಘಟಕದ ಅಧ್ಯಕ್ಷ ಅಬ್ದುಲ್ ನಾಸೀರ್ ದಾರಿಮಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ತಾಲೂಕಿನ ಆಹ್ವಾನಿತ 12 ತಂಡಗಳ ಹೊನಲು ಬೆಳಕಿನ ದಫ್ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ. ದಫ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 5,555ರೂ., ದ್ವಿತೀಯ ಬಹಮಾನ 3,333 ರೂ., ತೃತೀಯ ಬಹುಮಾನ 2,222 ಮತ್ತು ಚತುರ್ಥ ಬಹುಮಾನ 1,111 ರೂ. ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಎಂದು ಅವರು ತಿಳಿಸಿದರು.
ತಕಿಯುದ್ದೀನ್ ಕೋಯಕುಟ್ಟಿ ಉಸ್ತಾದ್ ಅನುಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಸೀದಿ ವಠಾರದಲ್ಲಿ 100 ತೆಂಗಿನ ಗಿಡಗಳನ್ನು ನಡೆಲಾಗುವುದು, ನೀರಾಶ್ರಯ ಕಲ್ಪಿಸಿ ಬರಡು ಭೂಮಿಯನ್ನು ಸುಂದರ ವನವನ್ನಾಗಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಉಜ್ರುಪಾದೆ ಎಸ್ಕೆಎಸ್ಸೆಸ್ಸೆಫ್ ಘಟಕದ ಕಾರ್ಯದರ್ಶಿ ನೌಫಲ್, ಸದಸ್ಯರಾದ ನೂರುದ್ದೀನ್ ಬಪ್ಪಳಿಗೆ , ಅಬ್ದುರ್ರಝಾಕ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.