ಜಿಲ್ಲೆಯ ಚರಂಡಿಗಳನ್ನು ಸ್ವಚ್ಛಗೊಳಿಸಲು ಜಿ.ಪಂ. ಸಿಇಒ ಸೂಚನೆ
ಮಂಗಳೂರು,ಜೂ 2: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಚರಂಡಿಗಳಲ್ಲಿರುವ ತ್ಯಾಜ್ಯ ಮತ್ತು ಕಸಕಡ್ಡಿಗಳನ್ನು ಸ್ವಚ್ಛಗೊಳಿಸಲು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀದ್ಯಾ ಸೂಚಿಸಿದ್ದಾರೆ.
ಅವರು ಜಿ.ಪಂ. ಮಿನಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ, ಅಲ್ಲಲ್ಲಿ ನಿಂತುಕೊಳ್ಳುವುದರಿಂದಲೇ ಮಲೇರಿಯಾ, ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗಗಳಿಗೆ ಮೂಲ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರಪಾಲಿಕೆ, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ಗಳು ಕೂಡಲೇ ತಮ್ಮ ವ್ಯಾಪ್ತಿಯ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತಾಗಲು, ಸ್ವಚ್ಛತೆ ನಡೆಸಬೇಕು. ಈಗಾಗಲೇ ಗ್ರಾಮ ಪಂಚಾಯತ್ಗಳಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಮಲೇರಿಯಾ, ಡೆಂಗ್ ಮತ್ತಿತರ ಪ್ರಕರಣಗಳು ಕಂಡುಬಂದ ಕೂಡಲೇ ಆರೋಗ್ಯ ಇಲಾಖೆಯವರು ಆ ರೋಗಿಯ ಮೇಲೆ ಹಾಗೂ ಅಲ್ಲಿನ ಪರಿಸರದ ಮೇಲೆ ವಿಶೇಷ ಗಮನಹರಿಸಬೇಕು. ಈ ಬಗೆ ದೈನಂದಿನ ಮಾಹಿತಿ ಪಡೆದುಕೊಳ್ಳಬೇಕು. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ರೋಗ ಪೀಡಿತರ ಬಗ್ಗೆ ಬರುವ ವರದಿಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಆಶಾ ಕಾರ್ಯಕರ್ತೆಯರು ಆರೋಗ್ಯ ಜಾಗೃತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು. ಸರಕಾರಿ ಕಚೇರಿಗಳು ತಮ್ಮ ಪರಿಸರ ಮತ್ತು ಕಚೇರಿ ವಠಾರವನ್ನು ಶುಚಿಯಾಗಿರಿಸಬೇಕು. ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
ಅಂಗಡಿ, ಗೂಡಂಗಡಿಗಳಲ್ಲಿ ಗ್ರಾಹಕರು ಎಳನೀರು ಕುಡಿದ ಬಳಿಕ ಅದರ ತ್ಯಾಜ್ಯಗಳನ್ನು ಪಕ್ಕದಲ್ಲಿಯೇ ಅದನ್ನು ರಾತ್ರಿಯವರೆಗೂ ಇಟ್ಟು, ರಾತ್ರಿ ಗೋಣಿ ಚೀಲದಲ್ಲಿ ಶೇಖರಿಸುವ ಬದಲು ಗ್ರಾಹಕರು ಬೊಂಡ ಕುಡಿದ ತಕ್ಷಣ ಅದರ ತ್ಯಾಜ್ಯಗಳನ್ನು ಗೋಣಿಗಳಲ್ಲಿ ಶೇಖರಿಸಬೇಕು. ಇದೇ ರೀತಿ ಖಾಲಿ ಸೋಡಾ ಬಾಟಲಿಗಳನ್ನು ಅಂಗಡಿ ವಠಾರದಲ್ಲಿಡುವುದನ್ನು ತಪ್ಪಿಸಬೇಕು. ಗುಜರಿ ಅಂಗಡಿಗಳಲ್ಲಿ ಹಳೇ ಟಯರುಗಳನ್ನು ತೆರೆದ ಪ್ರದೇಶಗಳಲ್ಲಿ ಇಡಲು ಅವಕಾಶ ನೀಡಬಾರದು. ಪರಿಸರ ಸ್ವಚ್ಛ ಇಡಲು ಅಂಗಡಿ ಮಾಲಕರು ನಿರಾಕರಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಸೂಚಿಸಿದರು.
ಮಂಗಳೂರು ಮಹಾನಗರಪಾಲಿಕೆಯು ಮಲೇರಿಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು. ವಿಶೇಷವಾಗಿ ಕಟ್ಟಡ ಕಾರ್ಮಿಕರಲ್ಲಿ ಮಲೇರಿಯಾ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವುದರಿಂದ ನಿರ್ಮಾಣ ಹಂತದ ಕಟ್ಟಡಗಳ ಮೇಲೆ ನಿಗಾ ಇಡಲು ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಲೇರಿಯಾ ನಿಯಂತ್ರಣ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅರುಣ್ ಕುಮಾರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.