×
Ad

ನವೆಂಬರ್ ಅಂತ್ಯಕ್ಕೆ ಲೇಡಿಗೊಶನ್ ಆಸ್ಪತ್ರೆ ಲೋಕಾರ್ಪಣೆ: ರಮಾನಾಥ ರೈ

Update: 2016-06-03 18:33 IST

ಮಂಗಳೂರು, ಜೂ.3: ಸರಕಾರಿ ಲೇಡಿಗೊಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು ಮಳೆಗಾಲ ಮುಗಿದ ನಂತರ ನವೆಂಬರ್ ಅಂತ್ಯಕ್ಕೆ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಅವರು ಇಂದು ಮಧ್ಯಾಹ್ನ ಲೇಡಿಗೋಶನ್ ಅಸ್ಪತ್ರೆಗೆ ಭೇಟಿ ನೀಡಿ ನೂತನ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಅನುದಾನ ಬೇಡಿಕೆ ಸಲುವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸದೆ ಕಾಮಗಾರಿಯನ್ನು ಮುಂದುವರಿಸಲು ಕಟ್ಟಡ ಕಂಟ್ರಾಕ್ಟರ್ ಶರೀಫ್ ಅವರಿಗೆ ಸೂಚಿಸಿದರು.

ಎಂಆರ್‌ಪಿಎಲ್ ವತಿಯಿಂದ 21.70 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಈ ಅನುದಾನದಲ್ಲಿ 18.4 ಕೋಟಿ ರೂ. ಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಉಳಿಕೆ ಮೊತ್ತವನ್ನು ಕಟ್ಟಡದ ಸಿವಿಲ್ ಕಾಮಗಾರಿಗಳಿಗೆ ಉಪಯೋಗಿಸಲಾಗುವುದೆಂದು ಸಚಿವರ ಅವಗಾಹನೆಗೆ ತಂದು ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ರೂ.10 ಕೋಟಿ ರೂ.ಗಳ ಅವಶ್ಯಕತೆ ಇದೆ ಎಂದು ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ.ಸವಿತಾ ಸಚಿವರ ಗಮನಕ್ಕೆ ತಂದರು.

ಸರಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯವರಲ್ಲಿ ಪ್ರಸ್ತಾವಿಸುವುದಾಗಿ ಸಚಿವರು ತಿಳಿಸಿದರು. ಅಲ್ಲಿಯವರೆಗೂ ವೆನ್‌ಲಾಕ್ ಸರಕಾರಿ ಜಿಲ್ಲಾ ಆಸ್ಪತ್ರೆಯ ಯೂಸರ್ಸ್‌ ಫಂಡ್‌ನಿಂದ ರೂ. 8.93 ಕೋಟಿ ರೂ.ವನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಠೇವಣಿಯಾಗಿ ಕಾಯ್ದಿರಿಸಿ ದ.ಕ.ನಿರ್ಮಿತಿ ಕೇಂದ್ರ ಸುರತ್ಕಲ್ ಇವರಿಂದ ಟೆಂಡರ್ ಮೂಲಕ ನಿರ್ವಸಲು ಸಚಿವರು ಸೂಚಿಸಿದರು.

ತುರ್ತು ಕಾಮಗಾರಿಗಳಾದ ಕಟ್ಟಡದ ಹೊರಗಡೆಯ ವಿದ್ಯುದೀಕರಣಕ್ಕೆ 2.30 ಕೋಟಿ ರೂ., ಕೊಠಡಿಗಳಿಗೆ ಹೈ ವೋಲ್ಟೇಜ್ ಹವಾನಿಯಂತ್ರಣ ಅಳವಡಿಕೆಗಾಗಿ 1.20ಕೋಟಿ ರೂ., ಮೆಡಿಕಲ್ಲ ಗ್ಯಾಸ್ ಪೈಪ್ ಲೈನ್ ಕಾಮಗಾರಿಗಾಗಿ ರೂ.1.50 ಕೋಟಿ, ಒಂದು ಲಿಪ್ಟ್‌ಗಾಗಿ ರೂ.0.36 ಕೋಟಿ, ಜನರೇಟರ್ 625 ಕೆ.ವಿ.ಎ. ಗಾಗಿ ರೂ. 0.55 ಕೋಟಿ, 2000 ಕೆ..ಎ. ಟ್ರಾನ್ಸ್‌ಫಾರ್ಮರ್‌ಗಾಗಿ ರೂ.0.55 ಕೋಟಿ, ಲ್ಯಾಮಿನಾಅರ ಎನ್.ಐ.ಸಿ.ಯು. ವಿಭಾಗದ ರಚನೆ ಕಾಮಗಾರಿಗಾಗಿ ರೂ.2.02 ಕೋಟಿ ಮತ್ತು ಪೀಠೋಪಕರಣಗಳು ಹಾಗೂ ಯಂತ್ರೋಪಕರಣಗಳ ಖರೀದಿಗಾಗಿ ರೂ.0.45 ಕೋಟಿ ಸೇರಿ ಒಟ್ಟು ರೂ.8.93 ಕೋಟಿ ಅನುದಾನ ಬೇಕಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾ, ಮಂಗಳೂರು ಮಹಾನಗರಪಾಲಿಕೆ ಸೂಪರಿಂಟೆಂಡೆಂಟ್ ಶಿವಶಂಕರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News