ವಿದ್ಯಾರ್ಥಿಗಳ ಕೊರತೆ: ಉಡುಪಿಯಲ್ಲಿ ಬಾಗಿಲು ಮುಚ್ಚಲಿವೆ ಇಪ್ಪತ್ತೈದು ಪ್ರಾಥಮಿಕ ಶಾಲೆಗಳು

Update: 2016-06-07 18:34 GMT

ಉಡುಪಿ, ಜೂ.7: ವಿದ್ಯಾರ್ಥಿಗಳ ಕೊರತೆಯ ಕಾರಣ ಉಡುಪಿ ಜಿಲ್ಲೆಯ 25 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚುವ ಭೀತಿ ಯನ್ನು ಎದುರಿಸುತ್ತಿವೆ. ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಿ, ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗಳನ್ನು ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿರುವ ಪಕ್ಕದ ಸರಕಾರಿ ಶಾಲೆಗೆ ಸೇರಿಸುವ ಸರಕಾರಿ ಆದೇಶ ಇದಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ 10ಕ್ಕಿಂತ ಕಡಿಮೆ ಇರುವ ಇಂಥ 25 ಶಾಲೆಗಳ ಪಟ್ಟಿಯನ್ನು ಈಗಾಗಲೇ ಇಲಾಖೆಯ ನಿರ್ದೇಶಕರಿಗೆ ಕಳುಹಿ ಸಲಾಗಿದ್ದು, ಅಲ್ಲಿಂದ ಸೂಚನೆ ಬಂದ ತಕ್ಷಣ, ಈ ಶಾಲೆಗಳಲ್ಲಿರುವ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗಳಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಲಿದೆ ಎಂದು ಇಲಾಖೆಯ ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ ತಿಳಿಸಿದ್ದಾರೆ.
ಹೀಗೆ ಮುಚ್ಚುವ ಶಾಲೆಗಳಲ್ಲಿ ಈಗ ಕಲಿಯುತ್ತಿರುವ ಮಕ್ಕಳನ್ನು ಪಕ್ಕದ ಶಾಲೆಗಳಿಗೆ ಸೇರ್ಪ ಡೆಗೊಳಿಸುವ ಎಲ್ಲಾ ಜವಾಬ್ದಾರಿಯನ್ನು ಇಲಾಖೆ ಹೊರಲಿದೆ. ಒಂದು ವೇಳೆ ಮುಚ್ಚುವ ಶಾಲೆಯ 1 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಶಾಲೆಗಳಿಲ್ಲದೇ ಹೋದಲ್ಲಿ, ಅಂಥ ಮಗುವನ್ನು ಸಮೀಪದ ಶಾಲೆಗೆ ಸೇರಿಸಿ ಆ ಮಗುವನ್ನು ಪ್ರತಿದಿನ ಶಾಲೆಗೆ ಕರೆದೊಯ್ದು, ಸಂಜೆ ಕರೆತಂದು ಬಿಡುವ ಸಾರಿಗೆ ವ್ಯವಸ್ಥೆಯನ್ನು ಸಹ ಇಲಾಖೆ ಮಾಡಲಿದೆ ಎಂದು ದಿವಾಕರ ಶೆಟ್ಟಿ ನುಡಿದರು.
ಜಿಲ್ಲೆಯಲ್ಲಿ ಮುಚ್ಚುವ ಶಾಲೆಗಳಲ್ಲಿ 23 ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ ಶಾಲೆಗಳು. ಎರಡು ಮಾತ್ರ ಉರ್ದು ಶಾಲೆಗಳು ಎಂದವರು ಹೇಳಿದರು. ಇವುಗಳಲ್ಲಿ ಹೆಚ್ಚಿನ ಶಾಲೆಗಳು ಬೈಂದೂರು ವಲಯದಲ್ಲಿ ಬರುತ್ತವೆ. ಮುಂದಿನ 3 ವರ್ಷಗಳಲ್ಲಿ ಮತ್ತೆ ವಿದ್ಯಾರ್ಥಿಗಳು ಬಂದರೆ ಶಾಲೆಗಳ ಪುನಾರಂಭಕ್ಕೆ ಅವಕಾಶವೂ ಇದೆ ಎಂದವರು ತಿಳಿಸಿದರು.
ಈ ವಿದ್ಯಾರ್ಥಿಗಳ ಕೊರತೆ ಹೊಂದಿರುವ ಶಾಲೆಗಳಲ್ಲಿ ಅಂಪಾರು ಶಾಲೆಯಲ್ಲಿ ಮಾತ್ರ ಶಿಕ್ಷಕರಿಲ್ಲ. ಉಳಿದಂತೆ ಎಲ್ಲ ಶಾಲೆಗಳಲ್ಲಿ ಶಿಕ್ಷಕರಿ ದ್ದಾರೆ. ಇವರನ್ನು ಹೆಚ್ಚುವರಿ ಶಿಕ್ಷಕರಾಗಿ ಪರಿಗಣಿಸಿ ಅಗತ್ಯವಿರುವ ಶಾಲೆಗಳಿಗೆ ಮರು ನೇಮಕ ಮಾಡಿ ಕೊಳ್ಳಲಾಗುವುದು ಎಂದು ಡಿಡಿಪಿಐ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಕಿರಿಯ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದರಿಂದ ಕನ್ನಡ ಭಾಷೆ ದುರ್ಬಲಗೊಳ್ಳುವುದು. ಇದರಿಂದ ಪ್ರತೀ ಶಾಲೆ ಹಾಗೂ ಹಳ್ಳಿಗಳ ನಡುವಿನ ಅವಿನಾ ಭಾವ ಸಂಬಂಧ ತುಂಡಾಗುವುದು ಎಂಬುದು ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿ ಗಳ ವಾದವಾದರೆ, ಆಂಗ್ಲ ಮಾಧ್ಯಮದ ಮೋಹಕ್ಕೆ ಸಿಲುಕಿರುವ ಕನ್ನಡಿಗರು ತಮ್ಮ ಮಕ್ಕಳನ್ನು ದುಬಾರಿಯಾದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷ, ವರ್ಷ ಕಡಿಮೆಯಾಗಿ ಸಾಲು-ಸಾಲು ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ ಎಂಬುದು ಇಲಾಖೆಯ ವಾದ. ಈ ಬಾರಿ ಮುಚ್ಚುವ ಶಾಲೆಗಳ ಪಟ್ಟಿಯಲ್ಲಿ ಆರ್ಗೋಡು, ಮಾವಿನಗುಳಿ, ಮೇಗದ್ದೆ, ಕುದಿ, ಕೊಡಬೈಲು, ಹರ್ಕೆಬಾಳು, ಶೀರೂರು (ಉರ್ದು), ಚುಂಗಿಗುಡ್ಡೆ, ಕುರ್ಸುಕಟ್ಟೆ, ಹೆಮ್ಮಾಡಿ, ಅಂಪಾರು, ಮೆಣಸಿನಹಾಡಿ, ಹಾಲಾಡಿ ಕೆರಾಡಿ, ಕೈಲಕೆರೆ, ಯಡಾಡಿ ಮತ್ಯಾಡಿ 2, ಹಳೆಅಗ್ರಹಾರ, ಅಲ್ತಾರುಬೀಡು, ಕೊರಂಗ್ರಪಾಡಿ, ಹರ್ಕೂರು ನಾರ್ತ್, ಗೋಳಿಹೊಳೆ (ಉರ್ದು), ಹಡವು, ದರ್ಗುಜೆ ಪ್ರಾಥಮಿಕ ಶಾಲೆಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News