×
Ad

ಮೋದಿಯಿಂದ ಓಲೈಕೆ ರಹಿತ ಆಡಳಿತ: ನಿರ್ಮಲಾ ಸೀತಾರಾಮನ್

Update: 2016-06-08 19:19 IST

ಮಂಗಳೂರು, ಜೂ.8: 2002ರ ಗೋಧ್ರಾ ಘಟನೆಯ ಸಂದರ್ಭ ಗುಜರಾತ್‌ನ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಪ್ರಧಾನಿಯಾಗಿಯೂ ನರೇಂದ್ರ ಮೋದಿಯವರು ಯಾವುದೇ ಸಮುದಾಯವೊಂದಕ್ಕೆ ಸೀಮಿತವಾಗಿ ಓಲೈಕೆಯ ರಾಜಕಾರಣ ಮಾಡದೆ ಸಮಸ್ತ ಜನತೆಯ ಪರವಾಗಿ ಆಡಳಿತ ನೀಡಿದ್ದಾರೆ ಎಂದು ಕೇಂದ್ರದ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪುರಭವನದಲ್ಲಿ ಇಂದು ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ‘ವಿಕಾಸಪರ್ವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು ವರ್ಷಗಳ ಹಿಂದೆ ಚುನಾವಣೆಯ ಸಂದರ್ಭ ಜನರಿಗೆ ನೀಡಲಾಗಿದ್ದ ಭರವಸೆಗಳನ್ನು ಜವಾಬ್ಧಾರಿಯುತ ನೆಲೆಯಲ್ಲಿ ಪೂರೈಸುತ್ತಿದ್ದು, ತಾನು ಜನರಿಗಾಗಿ ಮಾಡಿರುವ ಕಾರ್ಯಗಳನ್ನು ಜನತೆಗೆ ತಿಳಿಸುವ ಕಾರ್ಯವನ್ನು ಇದೀಗ ವಿಕಾಸ ಪರ್ವ ಕಾರ್ಯಕ್ರಮದ ಮೂಲಕ ಮಾಡುತ್ತಿದೆ. ಬದಲಾಗಿ ಈ ಕಾರ್ಯಕ್ರಮ ಯಾವುದೇ ರೀತಿಯ ಮನರಂಜನೆ ಅಲ್ಲ ಎಂದು ಅವರು ಹೇಳಿದರು.

2014ರ ಚುನವಣೆಯಲ್ಲಿನ ಭಾರೀ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರವನ್ನು ಸೂಟು ಬೂಟಿನ ಸರಕಾರವೆಂದು ಟೀಕಿಸುತ್ತಿದೆ. ಕೇಂದ್ರ ಸರಕಾರವು ಹಲವಾರು ಜನರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವೆಲ್ಲವೂ ಹಿಂದಿನ ಸರಕಾರದ ಯೋಜನೆಗಳೇ ಹೊರತು ಹೊಸತೇನನ್ನು ಮಾಡಿಲ್ಲ. ಏನು ವ್ಯತ್ಯಾಸ ಎಂದು ಪ್ರಶ್ನಿಸುತ್ತಿದೆ. ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವಲ್ಲಿನ ದೂರದೃಷ್ಟಿತ್ವದ ನಾಯಕತ್ವವನ್ನು ಎನ್‌ಡಿಎ ಸರಕಾರ ಹೊಂದಿದೆ. ಈ ಹಿಂದೆ ಕಲ್ಲಿದ್ದಲು ಗಣಿಗಾಗಿ ಪರವಾನಿಗೆ ನೀಡಲಾಗುತ್ತಿತ್ತೇ ಹೊರತು ನಮ್ಮ ಭೂಮಿಯಿಂದ ಒಂದು ಟನ್ ಕೂಡಾ ಕಲ್ಲಿದ್ದಲ್ಲನ್ನು ಮೇಲೆತ್ತಲಾಗಿಲ್ಲ. ಆದರೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲೇ ಕಲ್ಲಿದ್ದಲು ಆಮದು ನಿಂತಿದೆ.

ನಕಲಿ ರೇಶನ್ ಕಾರ್ಡ್‌ಗಳನ್ನು ರದ್ದು ಮಾಡಿ 36,000 ಕೋಟಿ ರೂ.ಗಳನ್ನು ಉಳಿತಾಯ ಮಾಡಲಾಗಿದೆ. ಪ್ರಧಾನಿ ಮೋದಿಯವರು ತಮ್ಮ ವಿದೇಶ ಪ್ರಯಾಣದಿಂದಾಗಿ ವಿಶ್ವದಲ್ಲಿ ಭಾರತದ ಮಾನ್ಯತೆ ಹೆಚ್ಚಿದೆ. ಯಾವುದೇ ಒಂದು ಸಚಿವರ ವಿರುದ್ಧ ಭ್ರಷ್ಟಾಚಾರದ ಹಗರಣವಿಲ್ಲ. ಹಿಂದೆ ರಾಜಕಾರಣಿಗಳು, ಸಚಿವರು ಜನಸಾಮಾನ್ಯರ ಕೈಗೆ ಸಿಗುತ್ತಿರಲಿಲ್ಲ. ಆದರೆ ಇಂದು ಸಚಿವ ಸಂಪುಟದ ಯಾವುದೇ ಸಚಿವ ಜನಸಾಮಾನ್ಯನಿಗೂ  ಸಿಗುತ್ತಿದ್ದಾರೆ. ಇದು ಮೋದಿ ಸರಕಾರದ ಸಾಧನೆ ಎಂದವರು ಬಣ್ಣಿಸಿದರು.

2 ವರ್ಷಗಳಲ್ಲಿ ನಕ್ಸಲ್- ಉಗ್ರವಾದ ಅಂತ್ಯ: ಹರಿಭಾಯಿ ಚೌದುರಿ

ನಕ್ಸಲ್ ಸಮಸ್ಯೆಯಿಂದ ಕಂಗೆಟ್ಟಿದ್ದ ದೇಶದ 10 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದಡಿ ಕಳೆದ ಎರಡು ವರ್ಷಗಳಲ್ಲಿ ಶೇ. 32ರಷ್ಟು ಈ ಆತಂಕ ಕಡಿಮೆಯಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ ನಕ್ಸಲ್ ಹಾಗೂ ಉಗ್ರವಾದ ಸಮಸ್ಯೆ ಕೊನೆಗೊಳ್ಳಲಿದೆ ಎಂದು ಕೇಂದ್ರದ ಗೃಹ ಇಲಾಖೆಯ ರಾಜ್ಯ ಸಚಿವ ಹರಿಭಾಯಿ ಪಿ. ಚೌಧುರಿ ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿದೇಶಗಳ ಜೊತೆಗಿನ ಸಂಬಂಧ ಉತ್ತಮಗೊಂಡಿದೆ. ಎರಡು ವರ್ಷಗಳ ಹಿಂದೆ ಭಾರತದಲ್ಲಿ 18,000 ಗ್ರಾಮಗಳು ವಿದ್ಯುತ್ ಮುಕ್ತವಾಗಿದ್ದು, ಎರಡು ವರ್ಷಗಳಿಂದೀಚೆಗೆ 5,342 ಗ್ರಾಮಗಳಿಗೆ ವಿದ್ಯುತ್ ಸೌಕರ್ಯ ಒದಗಿಸಲಾಗಿದೆ. ಉಳಿದ ಮೂರು ವರ್ಷಗಳಲ್ಲಿ 11,000 ಗ್ರಾಮಗಳಿಗೆ ವಿದ್ಯುತ್ ಸೌಕರ್ಯವನ್ನು ಒದಗಿಸುವ ಕಾರ್ಯ ಪೂರ್ಣಗೊಳ್ಳಲಿದೆ. ರೈತರಿಗೆ ರಸಗೊಬ್ಬರದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನೀಮ್‌ಯುಕ್ತ ರಸಗೊಬ್ಬರ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರವು ಕಳೆದ 730 ದಿನಗಳ ಆಡಳಿತದಲ್ಲಿ ದೇಶವನ್ನು ವಿಕಾಸದತ್ತ ಕೊಂಡೊಯ್ಯುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ದೇಶದ ಸಂಸತ್ತಿನಲ್ಲಿ ಶೇ.9ರಷ್ಟಿರುವ ಕಾಂಗ್ರೆಸ್ ಬಲವನ್ನು ತೆಗೆಯುವ ಮೂಲಕ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕಾಗಿದೆ. ದೇಶದಲ್ಲಿ 6 ರಾಜ್ಯಗಳಲ್ಲಿ ಮಾತ್ರವೇ ಪ್ರಸ್ತುತ ಕಾಂಗ್ರೆಸ್ ಸರಕಾರವಿದ್ದು, ಅಲ್ಲಿಯೂ ಕೇವಲ ಶೇ.7ರಷ್ಟು ಮಾತ್ರ ಜನಬೆಂಬಲವನ್ನು ಆ ಪಕ್ಷ ಪಡೆದಿದೆ. ಆ ರಾಜ್ಯಗಳಲ್ಲೂ ಕಾಂಗ್ರೆಸ್ ಮುಕ್ತಗೊಳಿಸುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಮೋತಿಲಾಲ್ ನೆಹರೂರಿಂದ ಹಿಡಿದು ರಾಹುಲ್ ಗಾಂಧಿವರೆಗಿನ ಗಾಂಧಿ ಮನೆತನದ ಒಡೆತನದಲ್ಲಿಯೇ ಕಾಂಗ್ರೆಸ್ ಪಕ್ಷ ನಲುಗುತ್ತಿದ್ದರೆ, ಬಿಜೆಪಿ ಪಕ್ಷದಲ್ಲಿ ಒಬ್ಬ ಚಹಾವಾಲಾ ಕೂಡಾ ಪ್ರಧಾನಿಯಾಗಬಹುದು. ಬಿಜೆಪಿ ಕಾರ್ಯಕರ್ತರ ಪಕ್ಷ. ಮುಂದಿನ 5 ವರ್ಷಗಳಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಲಿದ್ದು, 2030ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿದೆ ಎಂದು ಕೇಂದ್ರ ಸಚಿವ ಹರಿಭಾಯಿ ಚೌಧುರಿ ಅಭಿಪ್ರಾಯಿಸಿದರು.

2 ವರ್ಷಗಳಲ್ಲಿ ಜಿಲ್ಲೆಗೆ 5,000 ಕೋಟಿ ರೂ.ಅನುದಾನ: ಸಂಸದ ನಳಿನ್

ಕಳೆದ ಎರಡು ವರ್ಷಗಳಲ್ಲಿ ಕೇಂದ್ರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ 5,000 ಕೋಟಿ ರೂ.ಗಳ ಅನುದಾನ ಬಂದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ರೈಲ್ವೇಗಾಗಿ 608 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 3,374 ಕೋಟಿ ರೂ., ಬಂದರು ಅಭಿವೃದ್ದಿಗೆ 230, ಆರೋಗ್ಯಕ್ಕಾಗಿ 9 ಕೋಟಿ ರೂ., ಶಿಕ್ಷಣಕ್ಕಾಗಿ 628.29 ಕೋಟಿ ರೂ., ಎನ್‌ಎಂಪಿಟಿಗಾಗಿ 15 ಕೋಟಿ ರೂ. ಬಂದಿವೆ ಎಂದವರು ಹೇಳಿದರು.

ಮಂಗಳೂರು ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಗೇರಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದರೂ ರಾಜ್ಯ ಸರಕಾರ ಜಾಗವನ್ನು ಒದಗಿಸುತ್ತಿಲ್ಲ ಎಂದು ಸಂಸದ ನಳಿನ್ ಆಪಾದಿಸಿದರು. ಭ್ರಷ್ಟಾಚಾರ ರಹಿತ, ಅಭಿವೃದ್ಧಿಯುಕ್ತ ಭಾರತದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಾನು ಕೇವಲ ಪ್ರಧಾನ ಮಂತ್ರಿ ಅಲ್ಲ ಪ್ರಧಾನ ಸೇವಕ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಪ ಮೇಯರ್ ಸುಮಿತ್ರಾ ಕೆ., ಶಾಸಕ ಅಂಗಾರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಸ್ವಾಗತಿಸಿದರು. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಮಠಂದೂರು ವಂದಿಸಿದರು.

ಕಾಂಗ್ರೆಸ್ ಪಕ್ಷವನ್ನು ಓಡಿಸುವುದಿದ್ದರೆ ‘ಭಾರತ್ ಮಾತಾಕಿ ಜೈ’ ಎನ್ನಿ!

ಭಾರತದಲ್ಲಿ ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಮಾತಾಕಿ ಜೈ ಎಂಬ ಜಯಘೋಷ ಕೇಳುತ್ತಿದೆ. ಎಲ್ಲೆಲ್ಲಾ ಈ ಘೋಷಣೆ ಕೇಳಿಬರುತ್ತಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ ನಿರ್ನಾಮವಾಗಿದೆ. ಕಾಂಗ್ರೆಸ್ ಪಕ್ಷವನ್ನು ಓಡಿಸುವುದಿದ್ದರೆ ಭಾರತ್ ಮಾತಾಕಿ ಜೈ ಘೋಷಣೆಯನ್ನು ಕೂಗಿ’. ಇದು ಮಾಜಿ ಸಂಸದ ಹಾಗೂ ಬಿಜೆಪಿಯ ಎಸ್‌ಸಿ ಘಟಕದ ರಾಷ್ಟ್ರೀಯ ಅಧ್ಯಕ್ಷ ದುಷ್ಯಂತ್ ಕುಮಾರ್ ಗೌತಮ್ ‘ವಿಕಾಸ ಪರ್ವ’ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ ಪರಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕಾ ಬೆಳೆಗಳಾದ ಗೇರು, ಅಡಿಕೆ, ರಬ್ಬರ್, ಕಾಫಿ ಬೆಳೆಯುವವರು ಸಂಕಷ್ಟದಲ್ಲಿರುವ ಬಗ್ಗೆ ಅರಿವಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರದ ವಾಣಿಜ್ಯ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News