×
Ad

ಮೂಡುಬಿದಿರೆ: ಪ್ರಾಕೃತ ಭಾಷಾ ಸಂಪರ್ಕ ಶಿಬಿರ

Update: 2016-06-09 22:45 IST

ಮೂಡುಬಿದಿರೆ, ಜೂ.9: ಪ್ರಾಕೃತ ಭಾಷೆ ಪ್ರಕೃತಿಯ ಭಾಷೆ. ಪ್ರಾಕೃತ ಹಾಗೂ ಸಂಸ್ಕೃತ ಭಾಷೆಗಳು ನಮ್ಮಲ್ಲಿ ದೈವಿ ಸಾಕ್ಷಾತ್ಕಾರ ಉಂಟು ಮಾಡಿವೆ. ನಮ್ಮಲ್ಲಿರುವ ಸಕಾರಾತ್ಮ ಅಂಶಗಳನ್ನು ಹೆಚ್ಚಿಸಲು ಈ ಭಾಷೆಗಳ ಕೊಡುಗೆ ಅಪಾರ. ವೌಲ್ಯಗಳನ್ನು ಉನ್ನತೀಕರಿಸಲು ಪ್ರಾಚೀನ ಗ್ರಂಥಗಳ ಅಧ್ಯಯನ ಅಗತ್ಯ. ಪ್ರಾಕೃತ ಭಾಷೆಯ ಕಲಿಕೆಯಿಂದ ಧರ್ಮಗ್ರಂಥಗಳ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಲು ಸಾಧ್ಯ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

ಅವರು ಗುರುವಾರ ಇಲ್ಲಿನ ಶ್ರೀ ಜೈನಮಠದ ಧವಲತ್ರಯ ಜೈನಕಾಶಿ ಟ್ರಸ್ಟ್ ಆಶ್ರಯದಲ್ಲಿ ರಮಾರಾಣೀ ಶೋಧ ಸಂಸ್ಥಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಕೃತ ಭಾಷಾ ಸಂಪರ್ಕ ಶಿಬಿರ ಹಾಗೂ ಪತ್ರಕರ್ತ ಎ.ಆರ್ ರಘುರಾಂ ಅವರಿಗೆ ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ-2016 ವನ್ನು ಪ್ರದಾನ ಮಾಡಿ ಮಾತನಾಡಿದರು.

ಪ್ರಾಕೃತ ಭಾಷಾ ಸಂಪರ್ಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎ.ಆರ್ ರಘುರಾಂ, ಸಂಸ್ಕೃತದ ಜನನಿ ಪ್ರಾಕೃತ ಭಾಷೆ. ತಂತ್ರಜ್ಞಾನದ ಮೂಲಕ ನಾವಿಂದು ಜಾಗತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕ್ಷಣಾರ್ಧದಲ್ಲಿ ಸಂದೇಶ ರವಾನಿಸಬಹುದು. ತಂತ್ರಜ್ಞಾನದ ಅತೀ ಬಳಕೆಯಿಂದಾಗಿ ಮನಸ್ಸುಗಳನ್ನು ಬೆಸೆಯಬೇಕಾದ ಭಾಷೆ ಮರೆಯಾಗುತ್ತಿದೆ. ಯುವಜನರು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೈಂಕರ್ಯಕ್ಕೆ ಮುಂದಾಗಬೇಕು. ಹಿರಿಯರು ಮಕ್ಕಳಲ್ಲಿ ಪಾಶ್ಚಿಮಾತ್ಯ ಭಾಷೆಗಳನ್ನು ಹೇರುವ ಕೆಲಸವನ್ನು ಮಾಡಬಾರದು ಎಂದರು.

ಉದ್ಯಮಿ ಪುಷ್ಪರಾಜ್ ಜೈನ್, ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಎ.ದಿನೇಶ್ ಕುಮಾರ್, ಕಾರ್ಯಕ್ರಮದ ಪ್ರಾಯೋಜಕ ಸುಧೀರ್ ಜೈನ್ ಉಪಸ್ಥಿತರಿದ್ದರು.

ಸಂಶೋಧಕ ಡಾ.ವೈ.ಉಮಾನಾಥ ಶೆಣೈ, ವಿದ್ವಾಂಸ ಡಾ.ಎಸ್.ಪಿ ವಿದ್ಯಾಕುಮಾರ್, ಮೈಸೂರಿನ ಹಿರಿಯ ಪ್ರಾಕೃತ ತಜ್ಞ ಸುರೇಶ್ ಜೈನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾನಸಾ ಸ್ವಾಗತಿಸಿದರು. ನೇಮಿರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News