ತೃಪ್ತಿ- ಅತೃಪ್ತಿಗಳ ನಡುವೆ ಪರಿಹಾರ ಮೊತ್ತ ಸ್ವೀಕಾರ
ಮಂಗಳೂರು, ಜೂ.11: ನಂತೂರಿನಿಂದ ತಲಪಾಡಿ ಹಾಗೂ ಸುರತ್ಕಲ್ನಿಂದ ಮುಲ್ಕಿವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ವಿಶೇಷ ಅದಾಲತ್ ಇಂದು ನಗರದ ಮಿನಿ ವಿಧಾನಸೌಧದಲ್ಲಿ ನಡೆಯಿತು. ಈ ಅದಾಲತ್ ಕೆಲವರಿಗೆ ತೃಪ್ತಿ ನೀಡಿ ದರೆ, ಮತ್ತೆ ಕೆಲವರಿಗೆ ಪರಿಹಾರ ಮೊತ್ತದ ಬಗ್ಗೆ ಅಸಮಾಧಾನ, ಇನ್ನು ಕೆಲವರು ಸೂಕ್ತ ದಾಖಲೆಗಳಿಲ್ಲದೆ ಪರದಾಡಿದ ದೃಶ್ಯಗಳಿಗ ಸಾಕ್ಷಿಯಾಯಿತು. ಒಟ್ಟು 17 ಗ್ರಾಮಗಳಲ್ಲಿ ರಾಷ್ಟೀಯ ಹೆದ್ದಾರಿಗೆ ಭೂಸ್ವಾಧೀನಗೊಂಡು ಪರಿಹಾರ ಪಡೆಯದವರ ಪೈಕಿ 376 ಮಂದಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಲ್ಲಿ ಕಳೆದ 2 ವರ್ಷಗಳಲ್ಲಿ 296 ಪ್ರಕರಣಗಳಲ್ಲಿ ಪರಿಹಾರ ಹೆಚ್ಚಿಸಿ ಆದೇಶ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಒಟ್ಟು 17 ಗ್ರಾಮಗಳಲ್ಲಿ 56.72 ಹೆಕ್ಟೇರ್ ಭೂಸ್ವಾಧೀನಗೊಂಡಿದ್ದು, ಅದರಲ್ಲಿ ಕೇವಲ 34.51 ಹೆಕ್ಟೇರ್ಗೆ ಮಾತ್ರ ಪರಿಹಾರ ಪಾವತಿ ಸಲಾಗಿದೆ. ಉಳಿದ 22.21 ಹೆಕ್ಟೇರ್ ಜಮೀನಿಗೆ ಅಂದಾಜು 900 ಖಾತೆದಾರರಿಗೆ 53.62 ಕೋ.ರೂ. ಪರಿಹಾರ ಪಾವತಿಸುವ ಸಲುವಾಗಿ ಇಂದು ವಿಶೇಷ ಅದಾಲತ್ ನಡೆಯಿತು. ಪರಿಹಾರ ಪಡೆಯಲು ನೂರಾರು ಸಂಖ್ಯೆಯಲ್ಲಿ ಅರ್ಜಿದಾರರು ಆಗಮಿಸಿದ್ದು, ಸೂಕ್ತ ದಾಖಲೆಗಳನ್ನು ಹೊಂದಿದವರಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹಾಗೂ ಸಹಾಯಕ ಆಯುಕ್ತ ಡಾ.ಅಶೋಕ್ ಕುಮಾರ್ ಉಪಸ್ಥಿತಿಯಲ್ಲಿ ಪರಿಹಾರಧನದ ಚೆಕ್ ವಿತರಿಸಲಾಯಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪರಿಹಾರ ಪಡೆದುಕೊಳ್ಳಲು ಬಾಕಿ ಇರುವ ಭೂ ಮಾಲಕರಲ್ಲಿ ಅನೇಕರು ತಮ್ಮ ಖಾತೆಗಳನ್ನು ಅಪ್ಡೇಟ್ ಮಾಡಿಕೊಂಡಿಲ್ಲ. ಕೆಲವರು ಸಮರ್ಪಕ ಅರ್ಜಿಯನ್ನೂ ಸಲ್ಲಿಸದಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲೂ ಪರಿಹಾರ ಪಡೆದು ಕೊಳ್ಳಲು ಬಾಕಿ ಇರುವವರು ಅರ್ಹ ದಾಖಲೆ ಗಳೊಂದಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದು ಕೊಳ್ಳಲು ಅನುಕೂಲ ವಾಗುವಂತೆ ಅದಾಲತ್ ನಡೆಸಲಾಗುವುದು ಎಂದು ಹೇಳಿದರು. ಈಗಾಗಲೇ ಪರಿಹಾರ ಪಡೆದುಕೊಂಡ ಕೆಲ ಭೂಮಾಲಕರು ತಮಗೆ ಮಂಜೂರಾದ ಹೆಚ್ಚುವರಿ ಪರಿಹಾರ ಪಡೆದುಕೊಂಡರು. ಪರಿಹಾರ ಮೊತ್ತದ ಬಗ್ಗೆ ಅತೃಪ್ತರಾದ ಕೆಲವರು ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಅಭಿಪ್ರಾಯಿಸಿದರು.
ಮನೆಯ ನಷ್ಟ ಪರಿಹಾರವಾದರೂ ನೀಡಿ
‘‘ಸುಮಾರು 300 ವರ್ಷಗಳ ಹಳೆಯ ಮನೆಯದು. ನನ್ನ ಪೂರ್ವಜರು, ಮಕ್ಕಳು, ಮೊಮ್ಮಕ್ಕಳು ಹುಟ್ಟಿ ಬೆಳೆದಿದ್ದು ಅಲ್ಲಿಯೇ. ಈಗ ಮನೆ ಅಪಾಯದ ಸ್ಥಿತಿ ಯಲ್ಲಿದೆ. ನೀರಿದ್ದ ಬಾವಿಯನ್ನು ಮುಚ್ಚಲಾಗಿದೆ. ಮನೆಯ ಮೂಲ ದಾಖಲೆ ಪ್ರತಿಗಳನ್ನು ಈ ಹಿಂದೆ ಸರ್ವೇ ಸಂದರ್ಭ ಅಧಿಕಾರಿಯೊಬ್ಬರ ಬಳಿ ಕೊಟ್ಟಿದ್ದು, ಅದು ನಾಪತ್ತೆಯಾಗಿದೆ. ನನಗೆ ನನ್ನ ಮನೆಯ ನಷ್ಟ ಪರಿಹಾರವಾದರೂ ಕೊಡಿಸಿ.
ರಸ್ತೆಗೆ ಭೂಮಿ ನೀಡಿ ಸುಮಾರು 6 ವರ್ಷ ಕಳೆದರೂ ದಾಖಲೆ ಇಲ್ಲದೆ ಪರಿಹಾರ ಸಿಕ್ಕಿಲ್ಲ’’
ಹೀಗೆಂದು ಸುಮಾರು 88ರ ಹರೆಯದ, ಮುಲ್ಕಿ ಪಾವಂಜೆಯ ನಿವಾಸಿ ರುಕ್ಕಯ್ಯ ಮೂಲ್ಯ ಎಂಬವರು ತಮ್ಮ ಅಳಲನ್ನು ಸಹಾಯಕ ಆಯುಕ್ತ ಡಾ.ಅಶೋಕ್ ಕುಮಾರ್ ಎದುರು ತೋಡಿಕೊಂಡರು. ರುಕ್ಕಯ್ಯರ ಅಳಲನ್ನು ಕೇಳಿಸಿ ಕೊಂಡ ಡಾ. ಅಶೋಕ್, ಒಂದು ವಾರದೊಳಗೆ ಅವರ ದಾಖಲೆ ಪತ್ರಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಸೆಂಟ್ಸ್ಗೆ 20 ಲಕ್ಷ ವೌಲ್ಯದ ಭೂಮಿಗೆ ಸಿಕ್ಕಿದ್ದು ಬರೀ 1.80 ಲಕ್ಷ ರೂ.!
‘‘ತೊಕ್ಕೊಟ್ಟು ಜಂಕ್ಷನ್ ಬಳಿಯಿದ್ದ ತನ್ನ ಸುಮಾರು 2.5 ಸೆಂಟ್ಸ್ ಜಮೀನು 4 ವರ್ಷಗಳ ಹಿಂದೆ ಸ್ವಾಧೀ ನಗೊಂಡಿತ್ತು. ಅಲ್ಲೀಗ ಸೆಂಟ್ಸ್ವೊಂದಕ್ಕೆ ಸುಮಾರು 20 ಲಕ್ಷ ರೂ. ವೌಲ್ಯವಿದೆ. ನನಗೆ ಒಟ್ಟು ಸಿಕ್ಕಿದ್ದು ಸೆಂಟ್ಸ್ಗೆ 1.80 ಲಕ್ಷ ರೂ. ಹಾಗಾಗಿ ಪರಿಹಾರ ಮೊತ್ತ ಸಮಾಧಾನ ನೀಡಿಲ್ಲ. ಸಿವಿಲ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ’’ ಎಂದು ಹೆಚ್ಚುವರಿ ಪರಿಹಾರ ಮೊತ್ತವನ್ನು ಪಡೆದುಕೊಂಡ ತೊಕ್ಕೊಟ್ಟು ನಿವಾಸಿ ಗಂಗಾಧರ್ ಪ್ರತಿಕ್ರಿಯಿಸಿದರು. 2011ರಲ್ಲಿ ರಾ.ಹೆದ್ದಾರಿ ವಿಸ್ತರಣೆಗಾಗಿ ಗ್ಯಾರೇಜ್ ಹೊಂದಿದ್ದ ಗಂಗಾಧರ್ರ 2.5 ಸೆಂಟ್ಸ್ ಭೂಮಿ ಸ್ವಾಧೀನವಾಗಿತ್ತು. ಆಗ ಸೆಂಟ್ಸ್ಗೆ 1.50 ಲಕ್ಷ ರೂ.ನಂತೆ ಹೆದ್ದಾರಿ ಇಲಾಖೆಯಿಂದ ಪ್ರಕಟ ವಾದ ಒಟ್ಟು 3.74 ಲಕ್ಷ ರೂ.ಗಳನ್ನು ಗಂಗಾಧರ್ ಪರಿಹಾರ ಪಡೆದಿದ್ದರು. ಬಳಿಕ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಯಲ್ಲಿ ಸೆಂಟ್ಸ್ಗೆ ಒಟ್ಟು 1.80 ಲಕ್ಷ ರೂ. ಹಾಗೂ ಶೇ.9ರಷ್ಟು ಬಡ್ಡಿದರ ನಿಗದಿಪಡಿಸಲಾಯಿತು. ಅದರಂತೆ
ಇಂದು ಬಾಕಿಯಿದ್ದ ಹೆಚ್ಚುವರಿ ಸುಮಾರು 81 ಸಾವಿರ ರೂ. ಮೊತ್ತದ ಚೆಕ್ಕನ್ನು ಗಂಗಾಧರ್ ಸ್ವೀಕರಿಸಿದರು.
ಸ್ವಾಧೀನವಾದ ಭೂಮಿಯ ಸರ್ವೇ ನಂ. ಇಲ್ಲ!
ಜಪ್ಪಿನಮೊಗರು ಗ್ರಾಮದಲ್ಲಿ ಹೆದ್ದಾರಿಗಾಗಿ ಸ್ವಾಧೀನಗೊಂಡ ತಮ್ಮ ಭೂಮಿಯ ಸರ್ವೇ ನಂಬರ್ ನರಸಿಂಹ ಎಂಬವರಿಗೆ ತಿಳಿದಿಲ್ಲ. ‘ನಿಮ್ಮ ಭೂಮಿ ಸ್ವಾಧೀನಗೊಂಡಿದೆ. ಸಂಬಂಧಪಟ್ಟ 13 ದಾಖಲೆ ಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಿ’ ಎಂದು ಹೆದ್ದಾರಿ ಇಲಾಖೆಯಿಂದ ನರಸಿಂಹರಿಗೆ ನೋಟಿಸ್ ಬಂದಿದ್ದರೂ ಅದರಲ್ಲೂ ಸರ್ವೇ ನಂ. ಉಲ್ಲೇಖಿಸಿಲ್ಲ. ‘‘ನಮ್ಮ ಭೂಮಿ ಭೂನ್ಯಾಯ ಮಂಡಳಿಗೆ ಹೋಗಿ ಸುಮಾರು ವರ್ಷಗಳಾಗಿವೆ. ಅದರ ಸರ್ವೇ ನಂಬರ್ ಬಗ್ಗೆ ಸರ್ವೇಯರಿಗೂ ಗೊತ್ತಿಲ್ಲ. ಹಾಗಾಗಿ ತೊಂದರೆಯಾಗಿದೆ’’ ಎಂದು ನರಸಿಂಹ ಹೇಳಿದರು.
ಒಟ್ಟು 75 ಲಕ್ಷ ರೂ. ಪರಿಹಾರ ವಿತರಣೆ
ವಿಶೇಷ ಅದಾಲತ್ನಲ್ಲಿ ಶನಿವಾರ ಒಟ್ಟು 25 ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರ ಕೋರಿ ಅರ್ಜಿಗಳು ಬಂದಿದ್ದು, ಈ ಪೈಕಿ 23 ಪ್ರಕರಣಗಳು ಜಿಲ್ಲಾಧಿಕಾರಿ ನ್ಯಾಯಾ ಲಯದಲ್ಲಿ ಇತ್ಯರ್ಥವಾದ ಹೆಚ್ಚು ವರಿ ಪರಿಹಾರಕ್ಕಾಗಿನ ಅರ್ಜಿಗಳು. ಈ ಪ್ರಕರಣ ಗಳಿಗೆ ಸಂಬಂಧಿಸಿ ಒಟ್ಟು 46 ಲಕ್ಷ ರೂ. ಪರಿಹಾರ ಹಾಗೂ ಉಳಿದ 2 ಪ್ರಕರಣಗಳಿಗೆ 29 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.