ಉಳ್ಳಾಲ ವ್ಯಾಪ್ತಿಯಲ್ಲಿ ಮೂರು ಮೃತದೇಹಗಳು ಪತ್ತೆ
ಉಳ್ಳಾಲ, ಜೂ.15: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ, ಜೆಪ್ಪಿನಮೊಗರು ಅಳಿವೆಬಾಗಿಲು ನೇತ್ರಾವತಿ ಸೇತುವೆ ಸಮೀಪ ಹಾಗೂ ತಲಪಾಡಿ ಕೆ.ಸಿ.ರೋಡ್ ಸಮೀಪದ ಫ್ಲೈವುಡ್ ಅಂಗಡಿ ಬಳಿ ಒಟ್ಟು ಮೂರು ಮೃತದೇಹಗಳು ಗುರುವಾರ ಪತ್ತೆಯಾಗಿವೆ.
ಕೋಟೆಪುರ ಬ್ರೇಕ್ ವಾಟರ್ ಮಧ್ಯಭಾಗದ ಬಂಡೆಕಲ್ಲು ಮಧ್ಯದಲ್ಲಿ ಸುಮಾರು 40ವರ್ಷ ಆಸುಪಾಸಿನ ಪುರುಷನ ಮೃತದೇಹ, ಜೆಪ್ಪಿನಮೊಗರು ಅಳಿವೆಬಾಗಿಲು ನೇತ್ರಾವತಿ ಸೇತುವೆ ಸಮೀಪ 40 ವರ್ಷ ಆಸುಪಾಸಿನ ಪುರುಷನ ಮೃತದೇಹ ಸೇರಿದಂತೆ ತಲಪಾಡಿ ಕೆ.ಸಿ. ರೋಡ್ ಸಮೀಪದ ಪ್ಲೈವುಡ್ ಅಂಗಡಿ ಸಮೀಪ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ.
ಉಳ್ಳಾಲ ಸಮುದ್ರ ತಟದಲ್ಲಿ ಕೋಟೆಪುರ ಬ್ರೇಕ್ ವಾಟರ್ ಮಧ್ಯಬಾಗದ ಬಂಡೆಕಲ್ಲು ಮಧ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನದಿಯಲ್ಲಿ ನಾಡದೋಣಿಯಲ್ಲಿ ಸಾಗುತ್ತಿರುವಾಗ ಆಯತಪ್ಪಿ ಬಿದ್ದಿರಬಹುದು ಎಂದು ಸಂಶಯಿಸಲಾಗಿದೆ. ಕೆ.ಸಿ.ರೋಡ್ ಸಮೀಪ ಪತ್ತೆಯಾದ ಶವ ಸ್ಥಳೀಯ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂನ ಬಿರ್ಗಾಂವ್ ಮೂಲದ ಕೃಷ್ಣ ಬಿಸ್ವಾಸ್(20) ಎಂಬಾತನದ್ದು ಎಂದು ಗುರುತಿಸಲಾಗಿದ್ದು, ಹೃದಾಯಾಘಾತದಿಂದ ಸತ್ತಿರಬಹುದು ಎಂದು ಸಂಶಯಿಸಲಾಗಿದೆ.
ಜೆಪ್ಪಿನಮೊಗರು ಅಳಿವೆಬಾಗಿಲು ನೇತ್ರಾವತಿ ಸೇತುವೆ ಸಮೀಪ 40ವರ್ಷ ಆಸುಪಾಸಿನ ಪುರುಷನ ಮೃತದೇಹದ ಪಕ್ಕದಲ್ಲಿ ಮೊಬೈಲ್ ಪತ್ತೆಯಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.