ಬೈಲೂರಿನಲ್ಲಿ ಜಿ.ಪಂ.ಸದಸ್ಯನ ಕೊಲೆ ಯತ್ನ
ಕಾರ್ಕಳ, ಜೂ.16: ಬೈಲೂರು ಜಿ.ಪಂ.ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಎಂಬಾತನ ಮೇಲೆ ಓಮ್ನಿಯಲ್ಲಿ ಬಂದ ತಂಡವು ಕೊಲೆ ಯತ್ನಕ್ಕೆ ಮುಂದಾಗಿದ್ದು, ಸುಮಿತ್ ಶೆಟ್ಟಿ ಅನುಪಸ್ಥಿತಿಯನ್ನು ಕಂಡ ತಂಡ ಅಲ್ಲಿದ್ದ ಏಳು ಜನರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ.ಸದಸ್ಯ ಸುಮಿತ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿ, ಈ ಹಲ್ಲೆ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಒರುವಾಡಿ ಪ್ರವೀಣ್ ಕುಲಾಲ್ ಮತ್ತು ಕೊಡಿಕೆರೆ ವಿಶ್ವನಾಥ ಪೂಜಾರಿ ನೇತೃತ್ವದ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ವಿಶ್ವನಾಥ ಪೂಜಾರಿ ಕೋಡಿಕಲ್ ಎಂಬಾತ ಸುಮಿತ್ ಶೆಟ್ಟಿಗೆ ಫೋನಾಯಿಸಿ ಹಣ ನೀಡುವಂತೆ ಒತ್ತಾಯಿಸಿದ್ದ. ಬಳಿಕ ಜೂ.15ರಂದು ಮಧ್ಯಾಹ್ನದ ವೇಳೆ ಒರುವಾಡಿ ಪ್ರವೀಣ್ ಕುಲಾಲ್ ಸುಮಿತ್ ಶೆಟ್ಟಿ ಬಳಿ ಫೋನಾಯಿಸಿ ನಿನ್ನಲ್ಲಿ ನನಗೆ ಮಾತನಾಡಲಿಕ್ಕಿದೆ ಎಂದಿದ್ದ. ಬಳಿಕ ಹಿರಿಯಡ್ಕದಲ್ಲಿ ಸುಮಿತ್ ಶೆಟ್ಟಿಯನ್ನು ಭೇಟಿ ಮಾಡಿ, ಆತ ಕೂಡಾ ಹಣದ ಬೇಡಿಕೆ ಮುಂದಿಟ್ಟಿದ್ದ. ನನ್ನಲ್ಲಿ ಹಣ ಇಲ್ಲ ಎಂದು ಸುಮಿತ್ ಶೆಟ್ಟಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆತ ಕೋಪಗೊಂಡಿದ್ದ ಎನ್ನಲಾಗಿದೆ.
ಅದೇ ದಿನ ರಾತ್ರಿ ಸುಮಿತ್ ಶೆಟ್ಟಿಗೆ ರೌಡಿಶೀಟರ್ ತೆಳ್ಳಾರು ಸೋಮು ಎಂಬಾತ ಕೂಡಾ ಫೆನಾಯಿಸಿ, ನನಗೆ ಹಣ ನೀಡಬೇಕೆಂದನಲ್ಲದೆ, ಹಣ ಪಡೆಯಲು ರಾತ್ರಿ ಸಮಾರು 8:30ರ ವೇಳೆ ಬೈಲೂರಿಗೆ ಆಗಮಿಸಿದ್ದ. ಅದೇ ವೇಳೆ ಸುಮಿತ್ ನೇತೃತ್ವದ ತಂಡ ಸೋಮುನನ್ನು ಅಲ್ಲಿಯೇ ಹಿಡಿದಿಟ್ಟು, ಒರುವಾಡಿ ಪ್ರವೀಣನಿಗೆ ಕರೆ ಮಾಡಿದ್ದರು. ಪ್ರವೀಣ್ ತಾನು ತಕ್ಷಣ ಬರುವುದಾಗಿ ಹೇಳಿಕೊಂಡಿದ್ದ. ಆದರೆ ರಾತ್ರಿ 10:30ರ ತನಕ ಬೈಲೂರಿಗೆ ಆಗಮಿಸದಿರುವುದರಿಂದ ಕಾದು ಕುಳಿತ ಯುವಕರ ತಂಡದ ಪೈಕಿ ಹೆಚ್ಚಿನವರು ತಮ್ಮಮ್ಮ ಮನೆಗೆ ತೆರಳಿದ್ದರು.
ಈ ವೇಳೆ ಒರುವಾಡಿ ಪ್ರವೀಣ್ ಮತ್ತು ಆತನ ಇತರ ಸಹಚರರು ಸೇರಿ ಒಟ್ಟು 13 ಜನರ ತಂಡವು ಓಮ್ನಿ ಕಾರಿನಿಂದ ಬೈಲೂರಿಗಾಗಮಿಸಿತ್ತು. ಕಾರಿನಲ್ಲಿ ಇಳಿದಾಗ ಪ್ರವೀಣ್ ಪಿಸ್ತೂಲ್ನಿಂದ ನೆಲಕ್ಕೆ ಗುಂಡು ಹಾರಿಸಿ, ಸುಮಿತ್ ಶೆಟ್ಟಿ ಎಲ್ಲಿ ಎಂದು ಗದರಿಸಿದ್ದ. ಈ ವೇಳೆ ಅಲ್ಲಿ ಸುತ್ತ ನೆರೆದಿದ್ದವರಿಗೆ ಓಮ್ನಿಯಲ್ಲಿ ಬಂದ ಪ್ರವೀಣನ ಸಹಚರರು ತಲುವಾರಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತಲವಾರು ಬೀಸಿದ ಪರಿಣಾಮ ದೀಪಕ್ ನಕ್ರೆ, ಸುಧೀರ್ ನಿಟ್ಟೆ, ದೇವದಾಸ್ ಜೋಡುರಸ್ತೆ, ಅಮಿತ್ ಶೆಟ್ಟಿ ಜೋಡುರಸ್ತೆ, ವಾಸು ರಾವ್ ಕಾರ್ಕಳ, ರಾಕೇಶ್, ಸಂದೀಪ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.