ಸಜಿಪನಡು: ಗ್ರಾಪಂ, ಇಲ್ಮ್ ಇಂಡಿಯಾದಿಂದ ವಿಶಿಷ್ಟ ವಿದ್ಯಾರ್ಥಿ ಸಮ್ಮಿಲನ ಕಾರ್ಯಕ್ರಮ
ಬಂಟ್ವಾಳ, ಜೂ. 18: ಸಜಿಪನಡು ಗ್ರಾಮ ಪಂಚಾಯತ್ ಮತ್ತು ಇಲ್ಮ್ ಇಂಡಿಯಾ ಮಂಗಳೂರು ವತಿಯಿಂದ ’ಮಗುಸ್ನೇಹಿ’ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಜಿಪನಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸಮ್ಮಿಲನ ವಿಶಿಷ್ಟ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಜಿಪನಡು ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಶ್ಫಾಕ್ ಫೈಝಿ, ವಿದ್ಯೆ ನಮ್ಮನ್ನು ಮನುಷ್ಯನನ್ನಾಗಿಸುತ್ತದೆ. ಮಾನವೀಯತೆಯೊಂದಿಗೆ ನಾವು ನಡೆಸುವ ಜೀವನ ದೇವರಿಗೂ ಪ್ರೀಯವಾಗಿದ್ದು ವಿದ್ಯೆ ಕಲಿಸಿದ ಗುರು ಹಿರಿಯರನ್ನು ಗೌರವಿಸುವುದೂ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹಿತವಚನ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಸಜೀಪ ಮುಹಮ್ಮದ್ ನಾಸೀರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿದ್ದು ಅದಕ್ಕೆ ಪ್ರೇರಣೆ ನೀಡುವ ಸಲುವಾಗಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲೂ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶ ಎಂಬ ಕೀಳರಿಮೆಯನ್ನು ಬಿಟ್ಟು ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದನ್ನು ಸಜಿಪನಡು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳು ತೋರಿಸಿ ಕೊಟ್ಟಿದ್ದಾರೆ ಎಂದ ಅವರು, ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಶಿಕ್ಷಕ ವೃಂದಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಲೀಮತ್ ಮುರ್ಷಿದ, ಸನ್ವಿದ, ಶಶಾಂಕ್, ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮುಹಮ್ಮದ್ ಇಮ್ರಾನ್, ಫಲೀಲ ಸಿಮ್ಮಿತ್, ಶಾಹಿದಾರವರನ್ನು ವಿವಿಧ ಗಣ್ಯರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳಾಗಿ ಇದೇ ವಿದ್ಯಾರ್ಥಿಗಳು ವೇದಿಕೆಯಲ್ಲಿದ್ದರು. ಅಲ್ಲದೆ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರಿಗೆ ಸಾಮೂಹಿಕವಾಗಿ ಬೃಹತ್ ಅಭಿನಂದಾ ಪತ್ರವನ್ನು ಇದೇ ಸಂದರ್ಭದಲ್ಲಿ ಅತಿಥಿಗಳು ವಿತರಿಸಿದರು.
ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕುರಿತಾಗಿ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಮಂಗಳೂರು ಇದರ ಗೌರವ ಸಲಹೆಗಾರ ರಫೀಕ್ ಮಾಸ್ಟರ್, ವಿದ್ಯಾರ್ಥಿ ವೇತನ ಹಾಗೂ ಸರಕಾರಿ ಸವಲತ್ತು ಬಗ್ಗೆ ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಸಂಯೋಜಕ ಅಬ್ದುಲ್ ಖಾದರ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುನೀತ ಶಾಂತಿ ಮೋರಸ್, ಸಜಿಪನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಈರಪ್ಪ ಡಿ., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಲಾಸಿನಿ, ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಎನ್.ಅಬ್ದುಲ್ ರಹ್ಮಾನ್, ಅಬ್ದುಲ್ ರಶೀದ್, ಸುರೇಶ್ ಬಂಗೇರ, ಇಕ್ಬಾಲ್ ಬೈಲಗುತ್ತು ಉಪಸ್ಥಿತರಿದ್ದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರಪ್ಪ ಗೌಡ ಸ್ವಾಗತಿಸಿದರು. ಸಿಬ್ಬಂದಿ ಮುಝಮ್ಮಿಲ್ ವಂದಿಸಿದರು. ಪ್ರೌಢ ಶಾಲಾ ಉಪನ್ಯಾಸಕ ಲಕ್ಷಣ್ ಕಾರ್ಯಕ್ರಮ ನಿರೂಪಿಸಿದರು.