ಎರಡನೆ ಅವಧಿಗೆ ಆರ್ ಬಿಐ ಗವರ್ನರ್ ಆಗಲಾರೆ: ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್
ಹೊಸದಿಲ್ಲಿ,ಜೂ.19: ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿ ಎರಡನೆ ಅವಧಿಗೆ ಕಾರ್ಯನಿರ್ವಹಿಸಲು ರಘುರಾಮ್ ರಾಜನ್ ನಿರಾಕರಿಸಿದ್ದಾರೆ. ತನ್ನ ವಿರುದ್ಧ ತೀವ್ರ ಸಂದೇಹ ಹಾಗೂ ಟೀಕೆಗಳು ಕೇಳಿಬಂದ ಬೆನ್ನಲ್ಲೇ ಅವರು ಈ ಪ್ರಕಟಣೆಯನ್ನು ನೀಡಿದ್ದಾರೆ. ರಾಜನ್ ಆರ್ಬಿಐ ಸಿಬ್ಬಂದಿಯನ್ನುದ್ದೇಶಿಸಿ ಬರೆದ ಪತ್ರದಲ್ಲಿ, ರಾಜನ್, ಸೆಪ್ಟೆಂಬರ್ 4ರಂದು ತನ್ನ ಅಧಿಕಾರಾವಧಿ ಮುಗಿದ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ನ 23ನೇ ಗವರ್ನರ್ ಆಗಿ ನಾನು ಸೆಪ್ಟೆಂಬರ್ 2013ರಂದು ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಕರೆನ್ಸಿಯ ವೌಲ್ಯವು ಪ್ರತಿದಿನವೂ ಕುಸಿಯುತ್ತಲೇ ಇತ್ತು. ಹಣದುಬ್ಬರ ಅಧಿಕವಾಗಿತ್ತು ಹಾಗೂ ಆರ್ಥಿಕ ಬೆಳವಣಿಗೆ ದುರ್ಬಲವಾಗಿತ್ತು. ಭಾರತವು ಐದು ದುರ್ಬಲ ರಾಷ್ಟ್ರಗಳಲ್ಲೊಂದೆಂದೇ ಪರಿಗಣಿಸಲ್ಪಟ್ಟಿತ್ತು. ಗವರ್ನರ್ ಆದ ಬೆನ್ನಲ್ಲೇ ಹಣದುಬ್ಬರವನ್ನು ಇಳಿಸುವ ಬಗ್ಗೆ ಗಮನಹರಿಸಿದೆ. ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಲು ಅನಿವಾಸಿಗಳ ವಿದೇಶಿ ಕರೆನ್ಸಿ ಠೇವಣಿಯ ಹೆಚ್ಚಳ ಸೇರಿದಂತೆ ನೂತನ ಆರ್ಥಿಕ ಕಾರ್ಯಚೌಕಟ್ಟನ್ನು ರೂಪಿಸಿದ್ದಾಗಿ ಅವರು ಹೇಳಿದ್ದಾರೆ. ಭಾರತ್ ಬಿಲ್ ಪಾವತಿ ವ್ಯವಸ್ಥೆ ಹಾಗೂ ವಾಣಿಜ್ಯ ಸ್ವೀಕೃತಿಗಳ ವಿನಿಮಯ ಹಾಗೂ ಮೊಬೈಲ್ ಫೋನ್ಗಳ ಮೂಲಕ ಪಾವತಿ ವ್ಯವಸ್ಥೆಗಳನ್ನು ಆರಂಭಿಸುವ ಮೂಲಕ ಬ್ಯಾಂಕಿಂಗ್ನ ಗುಣಮಟ್ಟದಲ್ಲಿ ಭಾರೀ ಸುಧಾರಣೆ ತರಲು ಪ್ರಯತ್ನಿಸಿದ್ದಾಗಿ ಅವರು ಹೇಳಿದ್ದಾರೆ.
ಜಾಗತಿಕ ಆರ್ಥಿಕ ಮಾರುಕಟ್ಟೆಗಳಲ್ಲಿ ಉಂಟಾದ ಬಿರುಗಾಳಿಯ ಅಲೆಗಳ ಮೇಲೆಯೇ ತಾನು ಭಾರತದ ಭವಿಷ್ಯಕ್ಕೊಂದು ಸೇತುವೆಯನ್ನು ನಿರ್ಮಿಸಿರುವುದಾಗಿ ರಾಜನ್ ಪತ್ರದಲ್ಲಿ ಹೇಳಿದ್ದಾರೆ.
‘‘‘ ಆರ್ಬಿಐನ ವಿವಿಧ ಕ್ರಮಗಳಿಂದಾಗಿ ಬಡ್ಡಿದರಗಳನ್ನು 150 ಬೇಸಿಕ್ ಪಾಯಿಂಟ್ಗಳಷ್ಟು ಕಡಿತಗೊಳಿಸಲು ಸಾಧ್ಯವಾಗಿದೆ. ಸರಕಾರಕ್ಕೆ ಇದೇ ಮೊದಲ ಬಾರಿಗೆ 40 ವರ್ಷಗಳ ಬಾಂಡ್ಗಳನ್ನು ಬಿಡುಗಡೆಗೊಳಿಸಿತು. ಅಂತಿಮವಾಗಿ ಕರೆನ್ಸಿ ವೌಲ್ಯವು ಕೂಡಾ ಸ್ಥಿರಗೊಂಡಿತು. ವಿದೇಶಿ ಕರೆನ್ಸಿಗಳ ಹೊರಹರಿವಿಗೆ ನಾವು ಸಂಪೂರ್ಣ ಅವಕಾಶ ನೀಡಿದ ಹೊರತಾಗಿಯೂ ನಮ್ಮ ದೇಶದ ವಿದೇಶಿ ವಿನಿಮಯ ಸಂಗ್ರಹವು ದಾಖಲೆಯ ಮಟ್ಟಕ್ಕೆ ತಲುಪಿದೆ. ಇಂದು ನಾವು ಜಗತ್ತಿನ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಯುಳ್ಳ ದೇಶವಾಗಿದ್ದೇವೆ ಮತ್ತು ಐದು ಆರ್ಥಿಕ ದುರ್ಬಲ ರಾಷ್ಟ್ರಗಳ ಪಟ್ಟಿಯಿಂದ ನಿರ್ಗಮಿಸಿದ್ದೇವೆ ’’ಎಂದು ರಾಜನ್ ಪತ್ರದಲ್ಲಿ ತಿಳಿಸಿದ್ದಾರೆ.
ತಾನೋರ್ವ ಶಿಕ್ಷಣತಜ್ಞನಾಗಿದ್ದು, ಚಿಂತನೆಗಳ ವಲಯವೇ ತನ್ನ ಅಂತಿಮ ತಾಣವಾಗಿದೆ. ತನ್ನ ಮೂರು ವರ್ಷಗಳ ಅಧಿಕಾರಾಧಿ ಹಾಗೂ ಚಿಕಾಗೋ ವಿವಿಗೆ ತಾನು ಹಾಕಿರುವ ರಜೆಯ ಅವಧಿ ಇವೆರಡೂ ಮುಕ್ತಾಯದ ಹಂತವನ್ನು ತಲುಪಿವೆ. ಸರಕಾರದ ಜೊತೆ ಸಮಾಲೋಚನೆಯನ್ನು ನಡೆಸಿದ ಬಳಿಕ 2016 ಸೆಪ್ಟೆಂಬರ್ 4ರಂದು ಆರ್ಬಿಐ ಗವರ್ನರ್ ಆಗಿ ತನ್ನ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಶಿಕ್ಷಣಕ್ಷೇತ್ರಕ್ಕೆ ಮರಳಲು ತೀರ್ಮಾನಿಸಿರುವೆ. ಆದೇನಿದ್ದರೂ, ಅಗತ್ಯಬಿದ್ದಲ್ಲಿ ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಸದಾ ಲಭ್ಯವಿರುವೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ತನ್ನೊಂದಿಗೆ ಸಮರ್ಪಣಾ ಮನೋಭಾವ ಹಾಗೂ ದೃಢ ಬೆಂಬಲದೊಂದಿಗೆ ಕಾರ್ಯನಿರ್ವಹಿಸಿದ ಆರ್ಬಿಐ ಸಿಬ್ಬಂದಿಗೆ ರಾಜನ್ ಪತ್ರದಲ್ಲಿ ಕೃತಜ್ಞತೆ ಅರ್ಪಿಸಿದ್ದಾರೆ