ಭಟ್ಕಳ: ಬಿರುಸುಗೊಂಡ ಮಳೆ- ಮನೆ ಮೇಲೆ ಉರುಳಿದ ಮರ, ಅಪಾರ ಹಾನಿ
ಭಟ್ಕಳ,ಜೂ.18: ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನದ ವರೆಗೆ ಧಾರಾಕಾರವಾಗಿ ಸುರಿದ ಮಳೆಯು ಭಟ್ಕಳ ನಗರ ಹಾಗೂ ಗ್ರಾಮೀಣ ಭಾಗದ ಜನರು ತತ್ತರಿಸುವಂತೆ ಮಾಡಿದೆ.
ನಿರಂತರ ಮಳೆಗೆ ಹಲವುಕಡೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದ್ದು ಬೃಹದಾಕಾರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಕುಸಿದಿದ್ದು ಅಪಾರ ಹಾನಿ ಸಂಭವಿಸಿದ ಕುರಿತು ವರದಿಯಾಗಿದೆ.
ಶನಿವಾರ ಬೆಳಿಗ್ಗೆ 10ಗಂಟೆಯಿಂದ ಗುಡುಗು ಸಿಡಿಲಿನಿಂದ ಕೂಡಿದ ಗಾಳಿಮಳೆಯಿಂದಾಗಿ ಹಲವು ಮನೆಗಳ ಹಂಚು ಹಾರಿಹೋಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುಂಡಳಿ ಗ್ರಾಮದಲ್ಲಿ ಮೂರು, ಬೆಳ್ನಿಯಲ್ಲಿ ಎರಡು ಹಾಗೂ ಭಟ್ಕಳದ ಸಿದ್ದೀಖ್ ಸ್ಟ್ರೀಟ್ ನಲ್ಲಿ ಒಂದು ಮನೆಯ ಮೇಲೆ ಮರವು ಉರುಳಿಬಿದ್ದಿದೆ. ನಗರದ ಸೋನಾರ್ ಕೇರಿಯಲ್ಲಿ ಎರಡು ಮರಗಳು ಒಂದೇ ಮನೆಯ ಮೇಲೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಬಹಳಷ್ಟು ನಷ್ಟನ್ನುಂಟು ಮಾಡಿದೆ.
ನಿರಂತರ ಮಳೆಯಿಂದಾಗಿ ಜಾಲಿ ಪಂಚಾಯತ್ ವ್ಯಾಪ್ತಿಯ ಕಾರಗದ್ದೆ ಪ್ರದೇಶದಲ್ಲಿನ ರಸ್ತೆಯೊಂದು ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ಕುತ್ತು ತಂದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ನಗರದ ಸುಲ್ತಾನ್ ಸ್ಟ್ರೀಟ್, ಮಾರಿಕಟ್ಟಾ, ರಂಗೀಕಟ್ಟಾ, ಮತ್ತು ಮುಖ್ಯ ರಸ್ತೆ ಮಳೆನೀರಿನಿಂದ ತುಂಬಿಕೊಂಡಿದ್ದು ರಸ್ತೆ ಪಕ್ಕದಲ್ಲಿನ ಅಂಗಡಿಗಳಿಗೆ ನುಗ್ಗಿದೆ.
ಶಾಸಕ ಭೇಟಿ: ಮರ ಉರುಳಿ ಹಾನಿಗೊಳಗಾದ ಮನೆ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಜಲಾವೃತ ಪ್ರದೇಶಗಳಿಗೆ ಶಾಸಕ ಮಾಂಕಾಳ್ ವೈದ್ಯ ಜಿ.ಪಂ ಅಧ್ಯಕ್ಷ ಜಯಶ್ರೀ ಮೊಗೇರ್ ಭೇಟಿ ನೀಡಿ ಪರಿಶೀಲಿಸಿದ್ದು ಅಧಿಕಾರಿಗಳೊಂದಿಗೆ ಪರಿಹಾರ ಕಾರ್ಯಕೈಗೊಳ್ಳುವಂತೆ ಸೂಚಿಸಿದ್ದಾರೆ.