ಉಳ್ಳಾಲ: ಬಸ್ ಚಾಲಕನಿಗೆ ಹಲ್ಲೆ
ಉಳ್ಳಾಲ, ಜೂ.19: ನಾಲ್ವರ ತಂಡವೊಂದು ಬಸ್ ಚಾಲಕನಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದಿದ್ದು ಗಾಯಾಳು ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ಮ ಗ್ರಾಮದ ಬರುವ ನಿವಾಸಿ ನವೀನ್ ಡಿಸೋಜ (24) ಎಂಬವರೇ ಹಲ್ಲೆಗೊಳಗಾದ ಬಸ್ ಚಾಲಕ. ಮಂಗಳೂರಿನಿಂದ-ಉಳ್ಳಾಲ-ಸೋಮೇಶ್ವರ ಮಾರ್ಗವಾಗಿ ಸಂಚರಿಸುವ ಕರಾವಳಿ ಟ್ರಾವೆಲ್ಸ್(44ಎ)ಬಸ್ ಶನಿವಾರ ಸಂಜೆ ಹೊತ್ತಿಗೆ ಮಂಗಳೂರಿನಿಂದ ಸೋಮೇಶ್ವರಕ್ಕೆ ತೆರಳುತ್ತಿದ್ದಾಗ ಉಳ್ಳಾಲ ಮುಕ್ಕಚ್ಚೇರಿ ಬಸ್ಸು ತಂಗುದಾಣದಲ್ಲಿ ಸ್ಥಳೀಯನಾದ ನಿಸಾರ್(23)ಎಂಬಾತ ಬಸ್ ಹತ್ತಿ ಚಾಲಕನ ಎಡ ಬದಿಯಲ್ಲಿರುವ ಟೂಲ್ಸ್ ಬಾಕ್ಸ್ ಸೀಟಲ್ಲಿ ಕುಳಿತಿದ್ದ ಎನ್ನಲಾಗಿದೆ.
ಈ ವೇಳೆ ಬಸ್ ಚಾಲಕ ನವೀನ್, ಮುಂದಿನ ಬಸ್ಸು ತಂಗುದಾಣ ಕಾಲೇಜಿನ ವಿದ್ಯಾರ್ಥಿನಿಯರು ಬರುವವರಿದ್ದು ಹಿಂದಿನ ಸೀಟಲ್ಲಿ ಕೂರುವಂತೆ ಹೇಳಿದ್ದರು. ಇದರಿಂದ ಕುಪಿತಗೊಂಡ ನಿಸಾರ್ ಚಾಲಕ ನವೀನ್ಗೆ ಅವಾಚ್ಯವಾಗಿ ನಿಂದಿಸಿದ್ದು ಸೋಮೇಶ್ವರದವರೆಗೆ ಬಸ್ಸಲ್ಲೇ ಪ್ರಯಾಣಿಸಿ, ಬಸ್ ಅಲ್ಲಿಂದ ಹಿಂದಿರುಗಿ ಉಳ್ಳಾಲಕ್ಕೆ ಬರುವಾಗ ನಿಸಾರ್ ಮುಕ್ಕಚ್ಚೇರಿಯಲ್ಲಿ ಇಳಿದಿದ್ದ ಎನ್ನಲಾಗಿದೆ.
ಬಸ್ಸು ಮಂಗಳೂರಿಗೆ ತೆರಳಿ ಮತ್ತೆ ಸೋಮೇಶ್ವರದ ಕಡೆ ಪ್ರಯಾಣಿಸುತ್ತಿದ್ದ ವೇಳೆ ಮುಕ್ಕಚ್ಚೇರಿಯಲ್ಲಿ ನಿಸಾರ್ ತನ್ನ ಇತರ ಮೂವರು ಸಹಚರರೊಂದಿಗೆ ಸೇರಿ ಬಸ್ಸನ್ನು ಅಡ್ಡಗಟ್ಟಿ ಚಾಲಕ ನವೀನ್ಗೆ ಅವಾಚ್ಯವಾಗಿ ಬೈದು ತಲೆಯ ಹಿಂಭಾಗಕ್ಕೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡ ನವೀನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.