ರಾಜ್ಯದಲ್ಲಿ ಎಂಟು ಕೋಟಿ ಗಿಡ ನೆಡುವ ಯೋಜನೆ: ಸಚಿವ ರೈ

Update: 2016-06-20 11:46 GMT

ಮಂಗಳೂರು, ಜೂ.20: ಕೋಟಿ ವೃಕ್ಷ ಯೋಜನೆಯಡಿ ರಾಜ್ಯಾದ್ಯಂತ ಈ ವರ್ಷ ಎಂಟು ಕೋಟಿ ಗಿಡ ನೆಡಲು ಮುಂಗಡಪತ್ರದಲ್ಲೇ ಅವಕಾಶ ಒದಗಿಸಲಾಗಿದ್ದು, ರಾಜ್ಯದಲ್ಲಿ ವಿವಿಧೆಡೆ ಈ ವರ್ಷ ಕಾಡಿದ ಬರ ಪರಿಸ್ಥಿತಿ, ಕುಡಿಯುವ ನೀರಿನ ಕೊರತೆ, ತಾಪಮಾನ ಏರಿಕೆ ಮೊದಲಾದ ನೈಸರ್ಗಿಕ ವ್ಯತ್ಯಯ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅರಣ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ತಿಳಿಸಿದರು.

ಈ ಬಗ್ಗೆ ಇಂದು ಜಿ.ಪಂ. ಸಭಾಂಗಣದಲ್ಲಿ ಕೋಟಿ ವೃಕ್ಷ ಯೋಜನೆ ಕುರಿತು ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಪಿ. ಹನುಮಂತಪ್ಪ ಮಾತನಾಡಿ, ಕೋಟಿ ವೃಕ್ಷ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 2 ರಿಂದ 10 ತನಕ 4.70 ಲಕ್ಷ ಗಿಡ ನೆಡಲು ಸಿದ್ಧತೆ ನಡೆದಿದೆ ಎಂದರು. ಕಾರ್ಯಕ್ರಮದಡಿ ಅರಣ್ಯ ಇಲಾಖೆಯಿಂದ 1.85 ಲಕ್ಷ, ಸಾಮಾಜಿಕ ಅರಣ್ಯ ವಿಭಾಗದಿಂದ 2.20 ಲಕ್ಷ ಹಾಗೂ ತೋಟಗಾರಿಕಾ ಇಲಾಖೆಯಿಂದ 65 ಸಾವಿರ ಗಿಡಗಳನ್ನು ವಿತರಿಸಲಾಗುವುದು. ಎಲ್ಲಾ ಇಲಾಖೆಗಳು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಗಿಡ ನೆಡಲು ಲಭ್ಯವಿರುವ ಭೂಮಿ ಹಾಗೂ ಅಗತ್ಯವಿರುವ ಗಿಡಗಳ ಕುರಿತು ಮುಂದಿನ ಶುಕ್ರವಾರದೊಳಗೆ ಮಾಹಿತಿ ನೀಡಬೇಕೆಂದು ಅವರು ಹೇಳಿದರು.

ಶಾಲೆ ಮತ್ತು ಅಂಗನವಾಡಿಗಳಿಗೆ ಸಸಿಗಳನ್ನು ಪೂರ್ಣ ಉಚಿತವಾಗಿ ಪೂರೈಸಲಾಗುತ್ತಿದ್ದು, ಸಾರ್ವಜನಿಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತದೆ. ಸಾರ್ವಜನಿಕರಿಗೆ ದೊಡ್ಡ ಗಿಡಕ್ಕೆ ತಲಾ 3 ರೂ. ಹಾಗೂ ಸಣ್ಣ ಗಿಡಕ್ಕೆ 1 ರೂ. ರಿಯಾಯಿತಿ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಹಿರಿಯ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಲಭ್ಯ ಜಾಗ ಕಂಡುಹಿಡಿಯಬೇಕು. ರಾಷ್ಟ್ರೀಯ ಹೆದ್ದಾರಿ ಬದಿ, ಮಾಣಿ- ಸಂಪಾಜೆ ರಸ್ತೆ, ರೈಲ್ವೇ ಹಳಿ ಬದಿ, ಕೈಗಾರಿಕಾ ಪ್ರದೇಶ, ಸಮುದ್ರ- ನದಿ ತೀರ, ಅಂಗನವಾಡಿ, ಶಾಲೆ, ಪೊಲೀಸ್‌ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿ.ಎ. ಕಚೇರಿ, ಮೆಸ್ಕಾಂ, ದೇವಸ್ಥಾನ, ಇತರ ಪ್ರಾರ್ಥನಾ ಮಂದಿರ ಸೇರಿದಂತೆ ಎಲ್ಲಾ ಕಡೆ ಗಿಡಗಳನ್ನು ನೆಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಉದ್ಯೋಗ ಖಾತರಿ ಯೋಜನೆಯಲ್ಲಿ ಈಗಾಗಲೇ ಇರುವ ಗಿಡ ನೆಡುವ ಕಾರ್ಯಕ್ರಮ ಮುಂದುವರಿಯಲಿದೆ. ಈ ಯೋಜನೆಯಲ್ಲಿ ನೆಡುವ ಗಿಡಗಳನ್ನು ಮುಂದಿನ ಮೂರು ವರ್ಷ ನಿರ್ವಹಿಸುವ ವೆಚ್ಚವನ್ನು ಕೂಡ ಭರಿಸಲಾಗುವುದು ಎಂದರು.

ಪ್ರಕೃತಿ ಪ್ರೀತಿ ಅಭಿವ್ಯಕ್ತಿಗೆ ಅವಕಾಶ

ಜಿಲ್ಲೆಯಲ್ಲಿ ಪ್ರಕೃತಿ ಬಗ್ಗೆ ವರ್ಷ ಪೂರ್ತಿ ಮಾತನಾಡುವ, ಪ್ರತಿಭಟನೆ ನಡೆಸುವವರನ್ನು ಕೂಡ ಕೋಟಿ ವೃಕ್ಷ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಅವರಿಗೂ ಪ್ರಕೃತಿ ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ಅವಕಾಶ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧಿಕಾರಿಗಳಿಗೆ ಸೂಚಿಸಿದರು.
 ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಸಾರ್ವಜನಿಕ ವಿತರಣೆಗೆ ಲಭ್ಯ ಸಸಿಗಳ ವಿವರ

ವಲಯ                   ನರ್ಸರಿ ಹೆಸರು                          ಲಭ್ಯ ಗಿಡ                 ದೂರವಾಣಿ

ಮಂಗಳೂರು             ಪಡೀಲ್                                 45 ಸಾವಿರ            9448887973
ಬಂಟ್ವಾಳ                 ಶಂಭೂರು                              20 ಸಾವಿರ             9448134012
ಬೆಳ್ತಂಗಡಿ                 ಮುಂಡಾಜೆ- ಕಾಪು                    20 ಸಾವಿರ            9448729606
ಉಪ್ಪಿನಂಗಡಿ            ಉದನೆ                                  20 ಸಾವಿರ             9481375294
ಪುತ್ತೂರು                 ಕನಕಮಜಲು                           20 ಸಾವಿರ            9449068568
ಪಂಜ                     ಯೇನೆಕಲ್                              20 ಸಾವಿರ            9448216625
ಸುಬ್ರಹ್ಮಣ್ಯ               ಕಲ್ಲಾಜೆ                                  15 ಸಾವಿರ            9481390040
ಸುಳ್ಯ                     ಮೇದಿನಡ್ಕ                                25 ಸಾವಿರ          9620426901

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News