ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಬೀಳ್ಕೊಡುಗೆ
ಕೊಣಾಜೆ, ಜೂ.22:ದ.ಕ.ಜಿಲ್ಲಾ ಮಲೇರಿಯಾ ಕೇಂದ್ರ ಕಚೇರಿಯಲ್ಲಿ ಅಧೀಕ್ಷಕರಾಗಿ ಪದೋನ್ನತಿಗೊಂಡ ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಟು ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೋಭಾರತ್ನರನ್ನು ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಂಗಳವಾರ ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿದ್ಯಾ ಮಾತನಾಡಿ, ಉತ್ತಮ ಸೇವೆಯಿಂದಾಗಿ, ಕರ್ತವ್ಯ ನಿಷ್ಟೆಯಿಂದ ಪದೋನ್ನತಿಗೊಂಡಿರುವ ಶೋಭಾರತ್ನ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮೂಲಕ ಉತ್ತಮ ಹೆಸರು ಗಳಿಸುವಂತಾಗಲಿ ಎಂದು ಹಾರೈಸಿದರು.
ಸಿಬ್ಬಂದಿ ಸುರೇಂದ್ರ ಪೂಜಾರಿ ಮಾತನಾಡಿ, ಯಾರೊಂದಿಗೂ ಜಗಳ ಕಾಯದೆ ಎಲ್ಲರಲ್ಲೂ ಪ್ರೀತಿ ಹಾಗೂ ತಾಳ್ಮೆಯಿಂದಿದ್ದು ಕರ್ತವ್ಯ ನಿರ್ವಹಿಸಿದ ಫಲವೇ ಪದೋನ್ನತಿಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಲ್ಲಿಸಿದ ಸೇವೆ ಮುಂದುವರೆಯಲಿ ಎಂದರು.
ಕಿರಿಯ ಆರೋಗ್ಯ ಸಹಾಯಕಿ ಜಯಂತಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಶೋಭಾರತ್ನ ಅವರ ಸೇವೆಯನ್ನು ಹತ್ತಿರದಿಂದ ಕಂಡಿದ್ದೇನೆ. ಯಾರೊಂದಿಗೂ ನಿಷ್ಟುರ ಕಟ್ಟಿಕೊಳ್ಳದ ಅವರ ಸೇವೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಗುತ್ತಿಲ್ಲ ಎನ್ನುವ ಕೊರಗು ಇದೆ ಎಂದು ತಿಳಿಸಿದರು.
ತನ್ನ ಇದುವರೆಗಿನ ಕರ್ತವ್ಯದ ಅವಧಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ. ಇದುವರೆಗೆ ಸಲ್ಲಿಸಿದ ಸೇವೆ ತೃಪ್ತಿಯಾಗಿದ್ದು ಮುಂದೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊಂದಿದ್ದೇನೆ ಎಂದು ಶೋಭಾರತ್ನ ಹೇಳಿದರು.
ಈ ಸಂದರ್ಭ ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿರಾದ ಶುಭಾ, ದಿವ್ಯಶ್ರೀ, ಪ್ರಯೋಗಶಾಲೆಯ ಕಿರಿಯ ತಂತ್ರಜ್ಞೆ ಮೇಬಲ್ ರೇಗೋ, ಸ್ಟಾಫ್ ನರ್ಸ್ ಮೀನಾದೇವಿ, ಡಾ.ಅಮಿತ್ ರಾಜ್, ಜಾಂಬವತಿ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಾಸಿಸ್ಟ್ ಇಂದಿರಾ ಕೆ.ಎಸ್., ಸ್ಟಾಫ್ ನರ್ಸ್ ಯೋಗಿನಿ ಮೊದಲಾದವರು ಉಪಸ್ಥಿತರಿದ್ದರು.