ಉಡುಪಿ: ನೆರೆಯಲ್ಲಿ ಕೊಚ್ಚಿ ಹೋಗಿ ಯುವತಿ ಮೃತ್ಯು
ಉಡುಪಿ, ಜೂ.22: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಡುಪಿ ಸಮೀಪದ ನಿಟ್ಟೂರಿನಲ್ಲಿ ಜೂ.21ರಂದು ಉಂಟಾದ ಕೃತಕ ನೆರೆಗೆ ಯುವತಿಯೊಬ್ಬಳು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಪುತ್ತೂರು ಗ್ರಾಮದ ನಿಟ್ಟೂರಿನ ಕೊಡಪಾನಬೆಟ್ಟು ನಿವಾಸಿ ಸುಧಾಕರ ಪೂಜಾರಿ ಎಂಬವರ ಮಗಳು ಸುಚಿತ್ರಾ(25) ಎಂದು ಗುರುತಿಸ ಲಾಗಿದೆ. ಈ ಬಾರಿಯ ಮಳೆಗೆ ಜಿಲ್ಲೆಯ ಮೊದಲ ಬಲಿ ಇದಾಗಿದೆ.
ಇವರು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿರುವ ಡಾ.ಸತೀಶ್ ಕಾಮತ್ ಎಂಬವರ ಕ್ಲಿನಿಕ್ನಲ್ಲಿ ಕೆಲಸ ಮಾಡಿಕೊಂಡಿದ್ದು, ನಿನ್ನೆ ರಾತ್ರಿ 7:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ವಾಪಾಸು ಗರಡಿ ರಸ್ತೆಯ ತಿರುವು ಬಳಿ ನಡೆದುಕೊಂಡು ಬರುತ್ತಿದ್ದಾಗ ನೆರೆಯ ನೀರಿಗೆ ಆಯ ತಪ್ಪಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋದರು.
ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಇವರನ್ನು ಸ್ಥಳೀಯ ಜನರು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.