ಪೊಲೀಸ್ ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕನಿಂದ ಅಮಿತ್ ಶಾಗೆ ಢಿಕ್ಕಿ
ಹೊಸದಿಲ್ಲಿ,ಜೂನ್ 27: ಡೆಹ್ರಾಡೂನ್ ಪೊಲೀಸ್ನ ಕುದುರೆ ಶಕ್ತಿಮಾನ್ನ ಕಾಲು ಮುರಿದ ಪ್ರಕರಣದಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚಿಸಲ್ಪಟ್ಟ ಉತ್ತರಾಖಂಡದ ಮಸೂರಿಯ ಶಾಸಕ ಗಣೇಶ್ ಜೋಶಿ ಎಲ್ಲರೆದುರು ಅಮಿತ್ ಶಾರಿಂದ ಬೈಗುಳ ತಿಂದು ಬಿಜೆಪಿಯ ಇಡೀ ಕಾರ್ಯಕ್ರಮದಿಂದ ದೂರ ಉಳಿದ ಪ್ರಸಂಗ ವರದಿಯಾಗಿದೆ. ಹಲ್ದೂನಿಯ ಬಾಟಿಕಾ ಬಾಂಕ್ವೆಟ್ ಹಾಲ್ನಲ್ಲಿ ಬಿಜೆಪಿ ಪ್ರಾಂತೀಯ ಪರಿಷತ್ ಬೈಠಕ್ ನಡೆಯುತ್ತಿತ್ತು. ಅದರಲ್ಲಿ ಭಾಗವಹಿಸಲು ಬಂದಿದ್ದ ಶಾ ವೇದಿಕೆಯ ಕಡೆಗೆ ಹೋಗುತ್ತಿದ್ದರು. ಈ ನಡುವೆ ಶಾರ ಸಮೀಪ ತಲುಪಲಿಕ್ಕಾಗಿ ಶಾಸಕ ಜೋಶಿ ಮಧ್ಯೆ ನುಸುಳಿ ಢಿಕ್ಕಿಯಾದಾಗ ಶಾ ಬೀಳವುದೇನೋ ಬಾಕಿ ಉಳಿದಿತ್ತು. ಹೇಗೋ ಸಾವರಿಸಿಕೊಂಡರು.
ಅಲ್ಲಿದ್ದ ಭದ್ರತಾ ಅಧಿಕಾರಿಗಳಲ್ಲಿ ಶಾ ಬೀಳುತ್ತಿರುವುದನ್ನು ನೋಡಿ ಆತಂಕವಾಗಿತ್ತು. ಜೋಶಿಯ ಗಡಿಬಿಡಿಗೆ ಕೋಪಗೊಂಡ ಶಾ ತಮಗೆ ಮುಂದೆ ಹೋಗಲು ಅಷ್ಟು ಆಸೆ ಇದ್ದರೆ ನೀವೇ ಹೋಗಿ ವೇದಿಕೆಗೆ ಹತ್ತಿ ಕುಳಿತುಕೊಳ್ಳಿ ಎಂದು ಹೇಳಿದರು. ಶಾರ ಕೋಪ ನೋಡಿ ಅಲ್ಲಿಂದ ಪರಾರಿಯಾದ ಶಾಸಕ ಜೋಶಿ ಕಾರ್ಯಕ್ರಮ ಮುಗಿಯುವವರೆಗೂ ಕಂಡು ಬರಲಿಲ್ಲ ಎಂದು ತಿಳಿದು ಬಂದಿದೆ.