ವಳಚ್ಚಿಲ್ ಬಳಿ ಬಸ್‌ಗೆ ಕಾರು ಢಿಕ್ಕಿ: ಕಾರು ಚಾಲಕ ಮೃತ್ಯು

Update: 2016-06-28 15:02 GMT

ಬಂಟ್ವಾಳ, ಜೂ. 28: ನಿಂತಿದ್ದ ಬಸ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು ತಾಲೂಕಿನ ವಳಚ್ಚಿಲ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಅಡ್ಯಾರು ಕಣ್ಣೂರು ನಿವಾಸಿ ವಸಂತ್‌ರಾವ್ (85) ಮೃತಪಟ್ಟವರು.

ಇವರು ಫರಂಗಿಪೇಟೆಯಿಂದ ಕಣ್ಣೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮಾರುತಿ ಆಲ್ಟೊ ಕಾರು ವಳಚ್ಚಿಲ್ ದರ್ಗಾದ ಬಳಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸರಕಾರಿ ಬಸ್‌ಗೆ ಹಿಂದಿನಿಂದ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಅವರು ತೀವ್ರ ಸ್ವರೂಪದ ಗಾಯಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವೇಗವಾಗಿ ಬಂದ ಅವರು, ನಿಂತಿದ್ದ ಬಸನ್ನು ಗಮನಿಸದೆ ಢಿಕ್ಕಿ ಹೊಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ವಳಚ್ಚಿಲ್ ಆಟೊ ನಿಲ್ದಾಣದಲ್ಲಿದ್ದ ರಿಕ್ಷಾ ಚಾಲಕರು ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಸಂತ್‌ರಾವ್ರನ್ನು ಕಾರಿನಿಂದ ಹೊರತೆಗೆದರಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಬಳಿಕ ಸ್ಥಳಕ್ಕೆ ಬಂದ 108 ಆರೋಗ್ಯ ಕವಚ ಆಂಬ್ಯುಲೆನ್ಸ್‌ನಲ್ಲಿ ಮೃತ ದೇಹವನ್ನು ಮಂಗಳೂರು ಶವಗಾರಕ್ಕೆ ರವಾನಿಸಲಾಯಿತು. ಘಟನೆಯ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News