ಕುಳಾಯಿ: ಚೂರಿಯಿಂದ ಇರಿದುಕೊಂಡು ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ

Update: 2016-07-02 11:42 GMT

ಮಂಗಳೂರು, ಜು.2: ವ್ಯಕ್ತಿಯೋರ್ವ ಚೂರಿಯಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕುಳಾಯಿ ಎಂಬಲ್ಲಿ ಸಂಭವಿಸಿದೆ.

ಕುಳಾಯಿಯ ‘ಶ್ರೀದೇವಿ ಕೃಪಾ’ ಎನ್ನುವ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಮಂಗಳೂರಿನ ಕದ್ರಿ ಕಂಬಳ ನಿವಾಸಿ ಕೃಷ್ಣ ಎಂಬವರೇ ತನ್ನ ಹೊಟ್ಟೆಗೆ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಕೃಷ್ಣ ಕಳೆದ 5 ತಿಂಗಳುಗಳಿಂದ ಕುಳಾಯಿಯಲ್ಲಿರುವ ಶ್ರೀ ದೇವಿ ಕೃಪಾ ಎನ್ನುವ ಮನೆಯಲ್ಲಿ ಕೆಲಸಕ್ಕಿದ್ದರು. ಈ ಮನೆಯಲ್ಲಿ ವೃದ್ಧ ದಂಪತಿಗಳು ವಾಸವಾಗಿದ್ದು, ಇವರ ಸಹಾಯಕ್ಕಾಗಿ ಕೆಲಸಕ್ಕೆ ನೇಮಿಸಲಾಗಿತ್ತು. ಇಂದು ಮಧ್ಯಾಹ್ನ ವೇಳೆ ಕೃಷ್ಣ ಮದ್ಯಪಾನ ಮಾಡಿದ್ದು, ಇದ್ದಕ್ಕಿದ್ದಂತೆ ಅಡುಗೆ ಕೋಣೆಗೆ ತೆರಳಿ ಚೂರಿಯಿಂದ ಹೊಟ್ಟೆ ಹಾಗೂ ದೇಹದ ಇತರ ಭಾಗಗಳಿಗೆ ಇರಿದುಕೊಂಡಿದ್ದಾರೆ ಎನ್ನಲಾಗಿದೆ.

ಮನೆಯವರು ಕೂಡಲೇ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಇತ್ತ ಪೊಲೀಸರನ್ನು ಕಂಡ ವ್ಯಕ್ತಿ ಏಕಾಏಕಿ ಓಡಲು ಶುರು ಮಾಡಿದ್ದು, ಬೆನ್ನಟ್ಟಿದ ಪೊಲೀಸರು ಕುಳಾಯಿ ಜಂಕ್ಷನ್ ಬಳಿ ಈತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸ್ ವಾಹನದಲ್ಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News