ಕೊಯ್ಲ, ರಾಮಕುಂಜ, ಸವಣೂರುಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ
ಕಡಬ, ಜು.2. ಕೊಲ, ರಾಮಕುಂಜ ಹಾಗೂ ಸವಣೂರು ಗ್ರಾಮಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅಕ್ರಮ ಮರಳು ಅಡ್ಡೆಗೆ ಕಂದಾಯ ಇಲಾಖೆ ಹಾಗೂ ಭೂವಿಜ್ಞಾನ ಇಲಾಖಾಧಿಕಾರಿಗಳು ದಾಳಿ ನಡೆಸಿ, ದಾಸ್ತಾನು ಇಟ್ಟಿದ್ದ ಮರಳು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ನಡೆದಿದೆ. ರಾಮಕುಂಜ ಗ್ರಾಮದ ಅಬ್ಬಾಸ್ ಎಂಬವರ ಜಾಗದಲ್ಲಿ ಶೇಖರಿಸಿಟ್ಟಿದ್ದ 30 ಮೆಗಾ ಟನ್, ಕೊಯ್ಲ ಗ್ರಾಮದ ಪರಂಗಾಜೆ ಎಂಬಲ್ಲಿ ರಾಮಚಂದ್ರ ಎಂಬವರು ಶೇಖರಿಸಿಟ್ಟಿದ್ದ ಸುಮಾರು 200 ಮೆಗಾ ಟನ್, ಮತ್ತೊಂದೆಡೆ ಶೇಖರಿಸಿಟ್ಟಿದ್ದ ಸುಮಾರು 20 ಲೋಡು ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಡಬ ಕಂದಾಯ ನಿರೀಕ್ಷಕ ಕೊರಗಪ್ಪಹೆಗ್ಡೆ, ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿ ಪದ್ಮಶ್ರೀ, ಗ್ರಾಮಕರಣಿಕ ಪ್ರತಾಪ್, ದೇವಕಿ, ಗ್ರಾಮ ಸಹಾಯಕ ಜಯಂತ ದಾಳಿ ನಡೆಸಿದ್ದರು.
ಈ ಸಂದರ್ಭ ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮರಳು ಅಡ್ಡೆಗೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪಗೌಡ ಅಕ್ರಮವಾಗಿ ರಾಶಿ ಹಾಕಿದ್ದ ಸುಮಾರು 460 ಮೆಗಾ ಟನ್ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.