ದೇಶದ ಮಾನ ಮುಚ್ಚಲು ಒದ್ದಾಡುತ್ತಿರುವ ಜವಳಿ ಉದ್ಯಮ
ಸ್ವಾಂತಂತ್ರ ಪೂರ್ವ ಮತ್ತು ಬಳಿಕ ಜವಳಿ ಉದ್ಯಮ ಭಾರತದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳ ಮೇಲೆ ಬೀರಿದ ಪರಿಣಾಮ ಬಹುದೊಡ್ಡದು. ಸ್ವಾತಂತ್ರ ಚಳವಳಿಯು ಜವಳಿ ಉದ್ಯಮದ ಸ್ವಾವಲಂಬಿತನದ ಜೊತೆಗೆ ತಳಕು ಹಾಕಿಕೊಂಡಿದ್ದುದು ಕುತೂಹಲಕಾರಿ. ಗಾಂಧಿಯ ಸ್ವದೇಶಿ ಆಂದೋಲನದಲ್ಲಿ ಈ ಜವಳಿ ಉದ್ಯಮವೂ ಸೇರಿಕೊಂಡಿತ್ತೆನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಸ್ವಾತಂತ್ರ ಹೋರಾಟ, ಆ ಬಳಿಕದ ಕಾರ್ಮಿಕ ಸಂಘಟನೆಗಳಲ್ಲಿಯೂ ಈ ಮಿಲ್ಗಳ ಪಾತ್ರ ಹಿರಿದಾಗಿದೆ. ಜವಳಿ ಉದ್ಯಮ ಭಾರತದ ಆತ್ಮಾಭಿಮಾನದ ಪ್ರತೀಕವೂ ಹೌದು. ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದ್ದು ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಯಲ್ಲಿ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ದುರಂತವೆಂದರೆ, ಭಾರತ ವಿದೇಶಿಯರಿಗೆ ತನ್ನನ್ನು ತೆರೆದುಕೊಡುತ್ತಿರುವುದರಿಂದ ಜವಳಿ ಉದ್ಯಮದ ಮೇಲೆ ಭೀಕರ ಪರಿಣಾಮವನ್ನು ಉಂಟು ಮಾಡಿದೆ.
ಇದರಿಂದ ದೇಶದ ವಸ್ತ್ರೋದ್ಯಮ ಚಿಂದಿಯಾಗಿದೆ. ಜವಳಿ ಮಿಲ್ಗಳು ಬಾಗಿಲು ಮುಚ್ಚುತ್ತಿವೆ. ರಫ್ತು ಹೆಚ್ಚಾಗದ ಕಾರಣ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ವಿಪರ್ಯಾಸವೆಂದರೆ, ಬಾಂಗ್ಲಾದೇಶ ಮತ್ತು ವಿಯೇಟ್ನಾಂಗಳಂತಹ ದೇಶಗಳು ಅಗ್ರಸ್ಥಾನದ ಸ್ಪರ್ಧೆಯಲ್ಲಿ ಭಾರತವನ್ನು ಆರಾಮವಾಗಿ ಹಿಂದಿಕ್ಕಿವೆ. ಈ ಪರಿಸ್ಥಿತಿಯಿಂದ ಜವಳಿ ಉದ್ಯಮವನ್ನು ಹೊರಗೆ ತರಲು ಸರಕಾರ ಕಳೆದ ವಾರ ಈ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜೊಂದನ್ನು ಘೋಷಿಸಿತು. ಇದರಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಮತ್ತು ಹೆಚ್ಚುವರಿ ರೂ. 74,000 ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆಯಿದೆ ಎಂದು ಸರಕಾರ ಹೇಳುತ್ತಿದೆ. ನೂತನ ಕ್ರಮವು ಕಾರ್ಮಿಕ ಕಾನೂನನ್ನು ಮರುಪರಿಶೀಲಿಸಿದ್ದು, ಕಾರ್ಮಿಕರು ವಾರದಲ್ಲಿ ಎಂಟು ಗಂಟೆಗಳ ಕಾಲ ಹೆಚ್ಚುವರಿ ಕೆಲಸ ಮಾಡಲು ಮತ್ತು ವಸ್ತ್ರ ತಯಾರಕರು ತಂತ್ರಜ್ಞಾನ ಮತ್ತು ಕೈಗಾರಿಕೆಯನ್ನು ವಿಸ್ತರಿಸಲು ಹೆಚ್ಚುವರಿ ಸಬ್ಸಿಡಿಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಆದರೆ ಇಷ್ಟರಿಂದ ಭಾರತವು ಕಳೆದುಕೊಂಡ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಬಹುದೇ ಎನ್ನುವ ಪ್ರಶ್ನೆ ಉತ್ತರ ಇಲ್ಲದೆ ಬಿದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಾವು ಭಾರತದ ಜವಳಿ ಉದ್ದಿಮೆಯ ಪತನದ ಕಾರಣವನ್ನು ನೋಡಬೇಕಾಗಿದೆ.
ಭಾರತದ ಜವಳಿ ರಫ್ತು 2014-15ರಲ್ಲಿ ದಾಖಲಾದ 37.14 ಬಿಲಿಯನ್ ಡಾಲರ್ನಿಂದ ಸ್ವಲ್ಪ ಕೆಳಗಿಳಿದು ಕಳೆದ ವರ್ಷ 36.26 ಬಿಲಿಯನ್ ಡಾಲರ್ಗೆತಲುಪಿತ್ತು. ವಸ್ತ್ರೋದ್ಯಮದಲ್ಲಿ ಬಾಂಗ್ಲಾದೇಶದಿಂದ ಯುಎಸ್ಗೆ ರಫ್ತಿನ ಪ್ರಮಾಣ ಶೇ.12 ಏರಿಕೆ ಕಂಡರೆ ವಿಯೇಟ್ನಾಂ ಇದಕ್ಕಿಂತಲೂ ಮುಂದೆ ಸಾಗಿ ಶೇ.14% ಏರಿಕೆ ಕಂಡಿತ್ತು. ಇನ್ನೊಂದೆಡೆಯಲ್ಲಿ ಭಾರತದ ರಫ್ತಿನಲ್ಲಿ ಕೇವಲ ಶೇ.8% ಏರಿಕೆಯಾಗಿತ್ತು. ಭಾರತದ ಉಡುಪು ತಯಾರಿಕಾ ಫ್ಯಾಕ್ಟರಿಗಳು ಬಹಳ ಸಣ್ಣವು, ಇವುಗಳಲ್ಲಿ ಸರಾಸರಿಯಾಗಿ 150 ಕಾರ್ಮಿಕರು ಮತ್ತು 80 ಯಂತ್ರಗಳಿರುತ್ತವೆ ಎಂದು ವಸ್ತ್ರ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಯೊಬ್ಬರು ತಿಳಿಸುತ್ತಾರೆ. ಬಾಂಗ್ಲಾದೇಶದ ಫ್ಯಾಕ್ಟರಿಗಳಲ್ಲಿ ಏನಿಲ್ಲವೆಂದರೂ ಸರಾಸರಿ 600 ಕಾರ್ಮಿಕರು ದುಡಿಯುತ್ತಾರೆ ಎಂದವರು ಹೇಳುತ್ತಾರೆ. ಭಾರತ ಪ್ಯಾಕೇಜ್ಗಳ ಮೂಲಕ ಜವಳಿ ಉದ್ಯಮವನ್ನು ಮೇಲೆತ್ತಲು ಹವಣಿಸುತ್ತಿವೆಯಾದರೂ, ಎಫ್ಡಿಐ ಮೂಲಕ ಬೃಹತ್ ಕುಳಗಳು ಈಗಾಗಲೇ ಭಾರತದ ಮಾರುಕಟ್ಟೆಗಳನ್ನು ಆಪೋಷಣ ತೆಗೆದುಕೊಳ್ಳುತ್ತಿವೆ.
ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೊಂದಿದ್ದ ಭಾರತ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪರ್ಧೆಯನ್ನು ಎದುರಿಸಲಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಒಂದೆಡೆ ಕೊಟ್ಟಂತೆ ಮಾಡುತ್ತಿದ್ದರೂ ಸರಕಾರದ ನೀತಿಯಿಂದಾಗಿ ಕಚ್ಚಾ ವಸ್ತುಗಳು ದುಬಾರಿಯಾಗುತ್ತಿದೆ. ಇದನ್ನು ವಿರೋಧಿಸಿ ಈಗಾಗಲೇ ತಮಿಳುನಾಡು, ತೆಲಂಗಾಣದ ಜವಳಿ ಉದ್ದಿಮೆದಾರರು ಪ್ರತಿಭಟಿಸುತ್ತಿದ್ದಾರೆ. ಒಂದೆಡೆ ಹತ್ತಿಯನ್ನು ಬೃಹತ್ ಉದ್ದಿಮೆದಾರರು ಹೆಚ್ಚಿನ ಮಟ್ಟದಲ್ಲಿ ಸಂಗ್ರಹಿಸುತ್ತಿದ್ದಾರೆ. ಅಧಿಕ ತೆರಿಗೆಯಿಂದ ಆಮದು ದುಬಾರಿಯಾಗಿರುವುದರಿಂದ ಲಾಭಾಂಶ ಕಡಿಮೆಯಾಗುತ್ತಿದೆ. ಇದು ಕಾರ್ಮಿಕರು ಮತ್ತು ಉತ್ಪನ್ನದ ಮೇಲೆ ಸಹಜವಾಗಿಯೇ ಪರಿಣಾಮವನ್ನು ಬೀರುತ್ತಿದೆ. ಕಳೆದ ವರ್ಷವೊಂದರಲ್ಲೇ ಹತ್ತಿರ ಹತ್ತಿರ 600 ಜವಳಿ ಮಿಲ್ಗಳು ಮುಚ್ಚುಗಡೆಯಾಗಿವೆ ಎಂದು ಅಧಿಕೃತ ಅಂಕಿಅಂಶಗಳೇ ತಿಳಿಸುತ್ತವೆ. ಅಂದರೆ ಪ್ರತಿದಿನ ಎರಡು ಮಿಲ್ಗಳನ್ನು ಮುಚ್ಚಲಾಗುತ್ತಿದೆ. ಈ ಸಂಖ್ಯೆ ಕಳೆದ ದಶಕದಿಂದ ಏರುತ್ತಲೇ ಇದೆ. ಇದು ಕೈಗಾರಿಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಸರಕಾರ ಇನ್ನಷ್ಟೇ ಕಂಡುಕೊಳ್ಳಬೇಕಿದೆ.ವಿಪರ್ಯಾಸವೆಂದರೆ, ಮಿಲ್ಗಳ ಮುಚ್ಚುಗಡೆಗೆ ಕಾರ್ಮಿಕರನ್ನೇ ಹೊಣೆ ಮಾಡಲು ಸರಕಾರ ಮುಂದಾಗಿರುವುದು. ಕಾರ್ಮಿಕ ಮುಷ್ಕರಗಳು ಮಿಲ್ಗಳ ಸಮಸ್ಯೆಗಳ ಭಾಗ ಎಂದು ಸರಕಾರ ನಂಬಿದೆ. ಆದರೆ ಈ ಮುಷ್ಕರಗಳ ಹಿಂದಿರುವ ಕಾರ್ಮಿಕರ ನೋವುಗಳನ್ನು ಸರಕಾರ ಅರ್ಥ ಮಾಡಿಕೊಳ್ಳಲು ಯತ್ನಿಸುವುದೇ ಇಲ್ಲ. ಮಿಲ್ಗಳಲ್ಲಿ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಸ್ವಾತಂತ್ರಾ ನಂತರವೂ ವಿಶೇಷ ಬದಲಾವಣೆಗಳೇನೂ ಆಗಿಲ್ಲ.
ಭಾರೀ ಪ್ರಮಾಣದಲ್ಲಿ ಮಹಿಳಾ ಕಾರ್ಮಿಕರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಉದ್ಯಮಿಗಳು ಮಹಿಳೆಯರ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರನ್ನು ಅತ್ಯಂತ ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದಾರೆ.ಇದರ ವಿರುದ್ಧ ಮಾತನಾಡಿದರೆ ಲಾಕೌಟ್ ಬೆದರಿಕೆಯನ್ನು ಹಾಕುತ್ತಾರೆ.ಜವಳಿ ಉದ್ಯಮ ಎದುರಿಸುತ್ತಿರುವ ಅತಂತ್ರತೆ ಕಾರ್ಮಿಕರ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿದೆ. ಇದು ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತಿವೆ. ಸ್ವಾತಂತ್ರ ಚಳವಳಿಯ ಜೊತೆ ಜೊತೆಗೆ ಹೆಜ್ಜೆ ಹಾಕಿದ, ಭಾರತದ ಜನರಲ್ಲಿ ಸ್ವದೇಶಿ ಪ್ರಜ್ಞೆಯನ್ನು ಹುಟ್ಟು ಹಾಕಿದ ಜವಳಿ ಉದ್ಯಮ ಇಂದು ಪತನದ ಹಾದಿಯನ್ನು ಹಿಡಿಯುತ್ತಿರುವುದು ಭಾರತ ಎತ್ತ ಕಡೆ ಸಾಗುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ವಿಶ್ವದ ಮಾನವನ್ನು ಮುಚ್ಚಿದ್ದ ಭಾರತದ ಜವಳಿ ಉದ್ಯಮ ಇದೀಗ ತನ್ನ ಮಾನವನ್ನು ಮುಚ್ಚಲು ವಿದೇಶದೆಡೆಗೆ ಮುಖ ಮಾಡಿರುವುದು ನಿಜಕ್ಕೂ ವಿಷಾದನೀಯ.