ತಾಯಿ ಮಗು ಆತ್ಮಹತ್ಯೆ ಪ್ರಕರಣ: ಅತ್ತೆ ವಿರುದ್ಧ ದೂರು ದಾಖಲು

Update: 2016-07-11 14:09 GMT

ಪುತ್ತೂರು, ಜು.11: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕುರೆಮಜಲು ಎಂಬಲ್ಲಿ ವೇದಾವತಿ ಎಂಬವರು ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಶನಿವಾರ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮೃತ ವೇದಾವತಿ ಅವರ ಅತ್ತೆಯ ವಿರುದ್ದ ದೂರು ದಾಖಲಿಸಲಾಗಿದೆ.

ಮುಂಡೂರು ಗ್ರಾಮದ ಕುರೆಮಜಲು ನಿವಾಸಿ ಸತೀಶ್ ಪೂಜಾರಿ ಎಂಬವರ ಪತ್ನಿ ವೇದಾವತಿ (26) ಎಂಬವರು ತನ್ನ ಮಗು ಮನೀಶ್ (2.5) ಜೊತೆಗೆ ಕೆರೆಗೆ ಹಾರಿ ಮೃತಪಟ್ಟಿದ್ದರು. ಸತೀಶ್ ಮತ್ತು ವೇದಾವತಿ ಅವರ ವಿವಾಹವು ಕಳೆದ ಮೂರು ವರ್ಷಗಳ ಹಿಂದೆ ನಡೆದಿತ್ತು. ಶನಿವಾರ ರಾತ್ರಿ ಕುಟುಂಬದೊಂದಿಗೆ ಕುಳಿತುಕೊಂಡು ಟಿವಿ ನೋಡುತ್ತಿದ್ದ ವೇದಾವತಿ ಅವರು ಬಳಿಕ ತನ್ನ ಪತಿ ಹಾಗೂ ಮಗುವಿನೊಂದಿಗೆ ಶೌಚಾಲಯಕ್ಕೆ ಹೋಗಿದ್ದರು.

ಪತಿ ಸತೀಶ್ ಮೊದಲಿಗೆ ಶೌಚಕ್ಕೆ ಹೋಗಿ ಹಿಂತಿರುಗಿ ಬಂದು ಮಲಗಿದ್ದು, ವೇದಾವತಿ ಹಾಗೂ ಮಗು ಹಿಂತಿರುಗಿ ಬಂದಿರಲಿಲ್ಲ. ಬಹಳ ಹೊತ್ತಾದರೂ ತಾಯಿ ಮಗು ಮನೆಯೊಳಗೆ ಬಾರದ ಹಿನ್ನೆಲೆಯಲ್ಲಿ ಮನೆಮಂದಿ ಹುಡುಕಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮನೆಯ ಸಮೀಪದಲ್ಲಿನ ತೋಡಿನ ಬದಿಯಲ್ಲಿ ವೇದಾವತಿ ಅವರ ಮೊಬೈಲ್ ಸಿಕ್ಕಿತ್ತು. ಇದನ್ನು ಕಂಡು ಸಂಶಯಗೊಂಡು ಪಕ್ಕದಲ್ಲಿದ್ದ ಕೆರೆಯಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಬಳಿಕ ಅಗ್ನಿ ಶಾಮಕ ದಳದ ಸಹಾಯದಲ್ಲಿ ಮೃತದೇಹಗಳನ್ನು ಮೇಲೆತ್ತಲಾಗಿತ್ತು.

ಪ್ರಾಥಮಿಕ ತನಿಖೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿತ್ತು. ರವಿವಾರ ರಾತ್ರಿ ಮೃತ ವೇದಾವತಿ ಅವರ ಸೋದರ ಮಾವನ ಪತ್ನಿ ಶ್ರೀಮತಿ ಅವರು ವೇದಾವತಿ ಸಾವಿಗೆ ಆಕೆಯ ಪತಿಯ ತಾಯಿ ಪ್ರೇಮಾ ಅವರೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರೇಮಾ ಮತ್ತು ವೇದಾವತಿ ನಡುವೆ ಅಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ರೋಸಿ ಹೋದ ವೇದಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News