ಉಳ್ಳಾಲ: ದೂರು ಕೊಟ್ಟದ್ದಕ್ಕೆ ಬೀಫ್ ಸ್ಟಾಲ್ಗೆ ನುಗ್ಗಿ ಯುವಕನ ಕೊಲೆಯತ್ನ
ಉಳ್ಳಾಲ, ಜು.13: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿದ್ದ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ನಡೆದಿದೆ.
ತಂಡದಿಂದ ಹಲ್ಲೆಗೊಳಗಾದ ಯುವಕನನ್ನು ಉಳ್ಳಾಲ ಮಾಸ್ತಿಕಟ್ಟೆಯ ಅಂಗಡಿಯ ಮಾಲಕ ಮದನಿನಗರ ನಿವಾಸಿ ಮುಹಮ್ಮದ್ ಕಮಲುದ್ದೀನ್(22) ಎಂದು ಗುರುತಿಸಲಾಗಿದೆ. ಜಲ್ದಿ ಅರ್ಫಾನ್, ನಿಸಾರ್,ಜಾಫರ್ ಮತ್ತು ಇತರರು ಆರೋಪಿಗಳು.
ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಕಳೆದ ತಿಂಗಳು ಮಾಂಸದ ಸ್ಟಾಲ್ವೊಂದಕ್ಕೆ ನುಗ್ಗಿದ ನಾಲ್ಕು ಯುವಕರ ತಂಡವೊಂದು ಮಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದಿತ್ತು. ಈ ವಿಚಾರದಲ್ಲಿ ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೇ ಸೇಡಿಗೆ ಆರೋಪಿಗಳು ಇಂದು ಮತ್ತೆ ಸ್ಟಾಲ್ಗೆ ನುಗ್ಗಿ ಮಾಲಕನಿಗೆ ಕಬ್ಬಿಣದ ಸಲಾಕೆ, ಸೋಡಾ ಬಾಟಲಿಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಲುದ್ದೀನ್ನ ತಲೆ, ಭುಜ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.