ಬೆಳ್ತಂಗಡಿ: ಎಚ್ಪಿಸಿಎಲ್ ಪಂಪ್ಹೌಸ್ಗೆ ಬೀಗ ಜಡಿದ ಗ್ರಾಮಸ್ಥರು
ಬೆಳ್ತಂಗಡಿ, ಜು.16: ಎಚ್ಪಿಸಿಎಲ್ ಪೈಪ್ಲೈನ್ ಕಾಮಗಾರಿ ಆವಾಂತರದಿಂದ ಸಂಪೂರ್ಣ ಹದಗೆಟ್ಟಿರುವ ಕಳಿಯ ಗ್ರಾಮದ ಪರಪ್ಪುನಿಂದ ಕೊಯ್ಯೂರುಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅವ್ಯವಸ್ಥೆಯ ವಿರುದ್ಧ ನಾಗರಿಕರು ಶನಿವಾರ ಎಚ್ಪಿಸಿಎಲ್ ಪಂಪ್ಹೌಸ್ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಂಗಳೂರು-ಬೆಂಗಳೂರು ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಕಾಮಗಾರಿಯ ಸಂದರ್ಭದಲ್ಲಿ ಬೃಹತ್ ಗಾತ್ರದ ಹಿಟಾಚಿಗಳು ಡಾಮರು ರಸ್ತೆಯಲ್ಲಿ ಸಂಚರಿಸಿದರ ಪರಿಣಾಮವಾಗಿ ಪರಪ್ಪು- ಕೊಯ್ಯೂರು ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಈ ಬಗ್ಗೆ ಸಾರ್ವಜನಿಕರು ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಅನೇಕ ಬಾರಿ ಎಚ್ಪಿಸಿಎಲ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಶನಿವಾರ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದರು. ಅಲ್ಲಿನ ಪೆಲತ್ತಲಿಕೆ ಎಂಬಲ್ಲಿರುವ ಎಚ್ಪಿಸಿಎಲ್ ಪಂಪ್ಹೌಸ್ಗೆ ಬೀಗ ಜಡಿದರು.
ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆಯನ್ನು ಸಂಪೂರ್ಣವಾಗಿ ಡಾಮರೀಕರಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯವನ್ನು ಆಲಿಸಿದರು. ಎಚ್ಪಿಸಿಎಲ್ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಘಟನೆಯ ಬಗ್ಗೆ ವಿವರಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಕುವೆಟ್ಟು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಎಂ. ಶೆಟ್ಟಿ, ರಸ್ತೆಯ ದುರಸ್ಥಿಗೆ ತುರ್ತು ಪರಿಹಾರವಾಗಿ 1 ಲಕ್ಷ ರೂ. ಅನುದಾನದಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಿಸುವುದಾಗಿ ತಿಳಿಸಿದರು. ಆದರೆ ಎಚ್ಪಿಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಹಾಳು ಮಾಡಿರುವ ರಸ್ತೆಯನ್ನು ಅವರೇ ರಿಪೇರಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದು ಕುಳಿತರು.
ಮಧ್ಯಾಹ್ನದ ಬಳಿಕ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಸಂದೇಶ ಪಿ.ಜೆ., ಸ್ಥಳೀಯರಲ್ಲಿ ಮಾತುಕತೆ ನಡೆಸಿದರು. ಈ ಹಂತದಲ್ಲಿ ಆಗಮಿಸಿದ ಎಚ್ಪಿಸಿಎಲ್ ಅಧಿಕಾರಿಗಳಾದ ಯುವರಾಜ್ ಹಾಗೂ ವೆಂಕಟೇಶ್, ಗ್ಯಾಸ್ ಪೈಪ್ಲೈನ್ ಹಾದುಹೋಗಿರುವ ರಸ್ತೆಯನ್ನು ಮಾತ್ರ ದುರಸ್ತಿ ಮಾಡಿಕೊಡುವುದಾಗಿ ಹೇಳಿದರು. ಅದಕ್ಕೆ ಸಾರ್ವಜನಿಕರು ಒಪ್ಪಲಿಲ್ಲ. ಕೊನೆಗೆ ಎಸೈ ಸಂದೇಶ್, ಜು. 18ರಂದು ಜಿಪಂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಪೈಪ್ಲೈನ್ ಹಾದುಹೋಗಿರುವ ರಸ್ತೆಯ ಭಾಗದಲ್ಲಿ ಕಾಂಕ್ರಿಟೀಕರಣ ಹಾಗೂ ಉಳಿದ ಭಾಗದಲ್ಲಿ ತಾತ್ಕಾಲಿಕವಾದ ದುರಸ್ಥಿಯನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜು. 28ರೊಳಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ರಸ್ತೆಯನ್ನು ಬಿಟ್ಟುಕೊಡುವುದಾಗಿ ಭರವಸೆಯನ್ನು ನೀಡಿದ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕುಮಾರ್, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್, ಸದಸ್ಯರಾದ ತುಕರಾಮ ಪೂಜಾರಿ, ಪ್ರದೀಪ್ ಕುಮಾರ್, ವಿಶ್ವನಾಥ ಪೂಜಾರಿ, ಕರೀಂ, ಸ್ಥಳಿಯರಾದ ಕೆ.ಎನ್. ಗೌಡ, ಎಚ್. ಡಾಕಯ್ಯ ಗೌಡ, ಕೂಸಪ್ಪ ಗೌಡ, ಜಯಾನಂದ, ಕಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಇದ್ದರು.