ವಿಜೇಂದರ್ಗೆ ರಾಷ್ಟ್ರಪತಿ, ಪ್ರಧಾನಮಂತ್ರಿ ಅಭಿನಂದನೆ
ಹೊಸದಿಲ್ಲಿ, ಜು.17: ಡಬ್ಲುಬಿಒ ಏಷ್ಯಾ-ಪೆಸಿಫಿಕ್ ಸೂಪರ್ ಮಿಡ್ಲ್ವೇಟ್ ಪ್ರಶಸ್ತಿಯನ್ನು ಜಯಿಸಿರುವ ವಿಜೇಂದರ್ ಸಿಂಗ್ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆಯ ಮೂಲಕ ಸ್ಟಾರ್ ಬಾಕ್ಸರ್ ದೇಶಕ್ಕೆ ಹೆಮ್ಮೆ ತಂದಿರುವುದಾಗಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ನಡೆದ 10 ಸುತ್ತಿನ ಬಾಕ್ಸಿಂಗ್ ಸ್ಪರ್ಧೆಯಲಿ ವಿಜೇಂದರ್ ವೇಲ್ಸ್ ಸಂಜಾತ ಆಸ್ಟ್ರೇಲಿಯದ ಕೆರ್ರಿ ಹೋಪ್ರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ಪ್ರೊ-ಕಬಡ್ಡಿ ವೃತ್ತಿಜೀವನದಲ್ಲಿ ಸತತ ಏಳನೆ ಜಯ ಸಾಧಿಸಿದ್ದ ವಿಜೇಂದರ್ ಡಬ್ಲುಬಿಒ ರ್ಯಾಂಕಿಂಗ್ನಲ್ಲಿ 15ನೆ ಸ್ಥಾನ ತಲುಪಿದರು.
ಎದುರಾಳಿ ಬಾಕ್ಸರ್ನ್ನು ಮಣಿಸಿ ಏಷ್ಯಾ ಪೆಸಿಫಿಕ್ ಪ್ರಶಸ್ತಿಯನ್ನು ಜಯಿಸಿರುವ ವಿಜೇಂದರ್ರ ಚಾಣಾಕ್ಷತನಕ, ಶಕ್ತಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಕಠಿಣ ಹೋರಾಟ ನೀಡಿರುವ ವಿಜೇಂದರ್ ಗೆಲುವಿಗೆ ಅರ್ಹರಾಗಿದ್ದಾರೆ ಎಂದರು.
ವಿಜೇಂದರ್ ಸಾಧನೆಗೆ ಭಾರತದ ಕ್ರಿಕೆಟ್ನ ಸೀಮಿತ ಓವರ್ ತಂಡದ ನಾಯಕ ಎಂಎಸ್ ಧೋನಿ, ಸ್ಟಾರ್ ಬಾಕ್ಸರ್ ಮೇರಿ ಕೋಮ್, ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್, ಹರ್ಯಾಣ ಹಾಗೂ ದಿಲ್ಲಿ ಮುಖ್ಯಮಂತ್ರಿಗಳಾದ ಮನೋಹರ್ ಖಟ್ಟರ್ ಹಾಗೂ ಅರವಿಂದ್ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿದ್ದಾರೆ.
ಬಾಕ್ಸಿಂಗ್ ಸ್ಪರ್ಧೆ ನಡೆದ ತ್ಯಾಗರಾಜ್ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ಪ್ರೇಕ್ಷಕನಾಗಿ ಹಾಜರಿದ್ದ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ವಿಜೇಂದರ್ಗೆ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.