ಉಡುಪಿ: ಬೈಕ್‌ಗೆ ಬಸ್ ಢಿಕ್ಕಿಯಾಗಿ ಪೊಲೀಸ್ ಪೇದೆ ಮೃತ್ಯು

Update: 2016-07-18 14:15 GMT

ಉಡುಪಿ, ಜು.18: ಬೈಕ್‌ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಾಜರಗುತ್ತು ಎಂಬಲ್ಲಿ ಸಂಭವಿಸಿದೆ.
 
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ನೂರ್‌ಸಾಬ್ ಎಂಬವರ ಪುತ್ರ, ಹಿರಿಯಡ್ಕ ಠಾಣೆಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಾಮನೂರು ಭಾಷಮುಲ್ಲಾ (26) ಅಪಘಾತದಲ್ಲಿ ಮೃತಪಟ್ಟ ಪೇದೆ.

ಇಂದು ಮಧ್ಯಾಹ್ನ ಭಾಷಮುಲ್ಲಾ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಜರಗುತ್ತು ಬಳಿ ಎದುರಿನಿಂದ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಭಾಷಮುಲ್ಲಾ ರಸ್ತೆಗೆಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News