ಧರ್ಮಸ್ಥಳ ಕ್ಷೇತ್ರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ

Update: 2016-07-18 14:45 GMT

ಬೆಳ್ತಂಗಡಿ, ಜು.18: ಕನ್ನಡ ಚಲನಚಿತ್ರನಟ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಜೊತೆಗೆ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಶ್ರೀ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಡಾ. ಹೆಗ್ಗಡೆ ಅವರು ಶಿವರಾಜ್ ಕುಮಾರ್ ದಂಪತಿಗೆ ಶ್ರೀಕೃಷ್ಣನ ಮೂರ್ತಿಯ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ.ಹೆಗ್ಗಡೆಯವರು ಪಾರ್ವತಮ್ಮ ರಾಜ್‌ಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದರು. ಇತ್ತೀಚಿಗೆ ತಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಶಿವರಾಜ್ ಕುಮಾರ್ ವಿವರಿಸಿದಾಗ ಧರ್ಮಸ್ಥಳದ ಶಾಂತಿವನದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವಂತೆ ಡಾ. ಹೆಗ್ಗಡೆ ಸಲಹೆ ನೀಡಿದರು.

ಡಾ. ರಾಜ್‌ಕುಮಾರ್ ಅವರ ಶ್ರಾವಣಬಂತು ಚಲನಚಿತ್ರದ ಮದುವೆಯ ಈ ಬಂಧ ಅನುರಾಗದ ಸಂಬಂಧ ಹಾಡಿನ ಚಿತ್ರೀಕರಣ ಧರ್ಮಸ್ಥಳದಲ್ಲಿ ನಡೆದುದನ್ನು ಪ್ರತೀ ವರ್ಷ ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಈ ಹಾಡನ್ನು ನೆನಪು ಮಾಡಿಕೊಳ್ಳುತ್ತೇವೆ ಎಂದು ಹೆಗ್ಗಡೆಯವರು ತಿಳಿಸಿದರು.
  ಬಳಿಕ ಅವರು ಕ್ಷೇತ್ರದಿಂದ ಸೌತಡ್ಕ ದೇವಸ್ಥಾನಕ್ಕೆ ಮತ್ತು ಅಲ್ಲಿಂದ ಸುಬ್ರಹ್ಮಣ್ಯಕ್ಕೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News