×
Ad

ಉನಾ ದೌರ್ಜನ್ಯ: ಗುಜರಾತ್‌ನ ವಿವಿಧೆಡೆ ಬಂದ್

Update: 2016-07-20 21:28 IST

ರಾಜಕೋಟ್,ಜು.20: ಉನಾ ಪಟ್ಟಣದಲ್ಲಿ ಗೋರಕ್ಷಕರು ದಲಿತ ಯುವಕರನ್ನು ಬರ್ಬರವಾಗಿ ಥಳಿಸಿದ್ದನ್ನು ಪ್ರತಿಭಟಿಸಿ ದಲಿತ ಸಮುದಾಯದ ಸದಸ್ಯರು ಬುಧವಾರ ರಾಜ್ಯ ಬಂದ್‌ಗೆ ನೀಡಿದ್ದ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟ,ರಸ್ತೆ ತಡೆ ಘಟನೆಗಳು ನಡೆದಿರುವುದು ವರದಿಯಾಗಿದೆ. ತನ್ಮಧ್ಯೆ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾದರು.
ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿಯವರು ಗುರುವಾರ ಉನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಿಸಿದೆ. ಆಪ್ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಶುಕ್ರವಾರ ಅಲ್ಲಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ಸೌರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಗುಜರಾತ್ ಪ್ರದೇಶಗಳಲ್ಲಿ ಬಂದ್ ಸಂಪೂರ್ಣವಾಗಿದ್ದು,ಅಲ್ಲಲ್ಲಿ ಕಲ್ಲು ತೂರಾಟ ಮತ್ತು ರಸ್ತೆ ತಡೆಗಳು ನಡೆದಿವೆ. ಬಂದ್ ಬಹುಪಾಲು ಶಾಂತಿಯುತವಾಗಿತ್ತು ಎಂದು ತಿಳಿಸಿದ ಪೊಲೀಸರು, ರಾಜ್ಯದ ಇತರೆಡೆಗಳಲ್ಲಿ ಬಂದ್ ಕರೆ ಯಾವುದೇ ಪರಿಣಾಮ ಬೀರಿಲ್ಲ ಎಂದರು.
ಗಿರ್-ಸೋಮನಾಥ ಜಿಲ್ಲೆಯ ಉನಾದಲ್ಲಿ ಜು.11ರಂದು ದನದ ಚರ್ಮವನ್ನು ಸುಲಿದಿದ್ದಕ್ಕಾಗಿ ಕೆಲವು ದಲಿತ ಯುವಕರನ್ನು ಕ್ರೂರವಾಗಿ ಥಳಿಸಲಾಗಿತ್ತು. ಇದನ್ನು ವಿರೋಧಿಸಿ ದಲಿತ ಸಮುದಾಯದ ಸದಸ್ಯರು ರಾಜ್ಯಾದ್ಯಂತ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ರಾಜ್ಯದ ಹಲವಾರು ಪ್ರದೇಶಗಳಲ್ಲಿ ತುರ್ತು ಸಂದರ್ಭಕ್ಕಾಗಿ ಪೊಲೀಸರನ್ನು ಸನ್ನದ್ಧವಾಗಿರಿಸಲಾಗಿದೆ.
ಬಂದ್ ಕರೆಯಿಂದಾಗಿ ಸೌರಾಷ್ಟ್ರದ ಜುನಾಗಢ ಮತ್ತು ಅಮ್ರೇಲಿ ನಗರಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಶಾಲಾಕಾಲೇಜುಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಕೆಲವು ಪ್ರತಿಭಟನಾಕಾರರು ಜುನಾಗಢದ ಡಿಪೋದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಹಾನಿಯನ್ನುಂಟು ಮಾಡಿದ್ದಾರೆ. ಧೋರಾಜಿ ಮತ್ತು ಧ್ರೋಲ್‌ಗಳಂತಹ ಸಣ್ಣಪುಟ್ಟ ಪಟ್ಟಣಗಳಲ್ಲಿಯೂ ಬಂದ್ ಯಶಸ್ವಿಯಾಗಿದೆ.
 ರಾಜಕೋಟ್‌ನಲ್ಲಿಯೂ ಬೀದಿ ಪ್ರತಿಭಟನೆಗಳು ನಡೆದಿದ್ದು, ಸುಮಾರು 50 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಬಂದ್ ಆಚರಿಸಲಾಗಿರಲಿಲ್ಲ ಮತ್ತು ಪರಿಸ್ಥಿತಿ ಸಹಜವಾಗಿತ್ತು. ಪಟನ್‌ನಲ್ಲಿ ಪ್ರತಿಭಟನಾಕಾರರ ಗುಂಪೊಂದು ಚಲನಚಿತ್ರ ಮಂದಿರವೊಂದರ ಮೇಲೆ ಕಲ್ಲುತೂರಾಟ ನಡೆಸಿ ಬಲವಂತದಿಂದ ಅದನ್ನು ಮುಚ್ಚಿಸಿತು. ಅಲ್ಲಲ್ಲಿ ರಸ್ತೆ ತಡೆಗಳೂ ನಡೆದವು.
ದಲಿತ ಪ್ಯಾಂಥರ್ಸ್ ಮತ್ತು ಇತರ ದಲಿತ ಸಂಘಟನೆಗಳ ಬಂದ್ ಕರೆ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಹಲವಾರು ಮಾರ್ಗಗಳಲ್ಲಿ ಸರಕಾರಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರು.
ಅಹ್ಮದಾಬಾದ್‌ನ ಕೆಲವೆಡೆಗಳಲ್ಲಿ ಬಂದ್‌ಗೆ ಪ್ರಯತ್ನಿಸಿದ ಪ್ರತಿಭಟನಾಕಾರರು ಅಂಗಡಿಗಳು ಮತ್ತು ಶಾಲಾಕಾಲೇಜುಗಳನ್ನು ಮುಚ್ಚುವಂತೆ ಬಲವಂತಗೊಳಿಸಿದ್ದು ವರದಿಯಾಗಿದೆ.
ಏಳು ದಲಿತ ಯುವಕರನ್ನು ಬರ್ಬರವಾಗಿ ಥಳಿಸಲಾಗಿದ್ದ ಉನಾದ ಮೋಟಾ ಸಮಾಲಿಯಾಲ ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ಸಂತ್ರಸ್ತರಿಗೆ ನ್ಯಾಯ ದೊರಕುವಂತಾಗಲು ಸರಕಾರವು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಭರವಸೆ ನೀಡಿದರು.
ದಲಿತರನ್ನು ಥಳಿಸುತ್ತಿರುವ ದೃಶ್ಯವನ್ನು ನೋಡಿದ ಯಾರಿಗೇ ಆದರೂ ಕಳವಳವಾಗುತ್ತದೆ. ಇದು ಯಾವುದೇ ನಾಗರಿಕ ಸಮಾಜಕ್ಕೆ ಹೇಳಿಸಿದ್ದಲ್ಲ. ಆರೋಪಿಗಳ ಬಂಧನ ಮತ್ತು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೇರಿದಂತೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ರಾಜ್ಯ ಸರಕಾರವು ಕೈಗೊಂಡಿದೆ ಎಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್ ತಿಳಿಸಿದರು. ಸಾಮಾಜಿಕ ನ್ಯಾಯ ಸಚಿವ ರಮಣಲಾಲ ವೋರಾ ಮತ್ತು ಅಹ್ಮದಾಬಾದ ಸಂಸದ ಕಿರೀಟ್ ಸೋಲಂಕಿ ಅವರ ಜೊತೆಯಲ್ಲಿದ್ದರು.
ದಲಿತರ ಪ್ರತಿಭಟನೆ ರಾಜ್ಯದ ಹಲವರು ಭಾಗಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಮಂಗಳವಾರ ಅಮ್ರೇಲಿ ಜಿಲ್ಲೆಯಲ್ಲಿ ಕಲ್ಲುತೂರಾಟದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕೊಲ್ಲಲ್ಪಟ್ಟಿದ್ದರು. ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಲಾಗಿತ್ತು. ಕನಿಷ್ಠ 10 ದಲಿತರು ಆತ್ಮಹತ್ಯೆಗೆ ಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News