ಸುಳ್ಯ: ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
Update: 2016-07-24 13:49 GMT
ಸುಳ್ಯ, ಜು.24: ತೊಡಿಕಾನಕ್ಕೆ ಹೋಗಿದ್ದ ಅಡೂರಿನ ವ್ಯಕ್ತಿಯೋರ್ವರು ಮತ್ಸ್ಯಧಾಮ ಗುಂಡಿಯ ಬಳಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಪೈಚಾರಿನ ಜಯಪ್ರಕಾಶ್ ಹಾಗೂ ಅವರ ಸಂಬಂಧಿ ಅಡೂರಿನ ರಾಧಾಕೃಷ್ಣ (50) ಎಂಬವರು ತೊಡಿಕಾನಕ್ಕೆ ಹೋಗಿದ್ದರು. ಅಲ್ಲಿ ಮೀನಿನ ಗುಂಡಿಯ ಬಳಿ ಹೋಗಿ ಮೀನಿಗೆ ಆಹಾರ ಹಾಕಿ, ಕೈ ಕಾಲು ತೊಳೆಯಲು ಹೊಳೆಗೆ ಇಳಿದರೆನ್ನಲಾಗಿದೆ. ಆಗ ರಾಧಾಕೃಷ್ಣರು ಕಾಲು ಜಾರಿ ಬಿದ್ದಿದ್ದು, ತಲೆಗೆ ಪೆಟ್ಟಾಗಿತ್ತು.
ಅವರನ್ನು ರಕ್ಷಿಸಲು ಜೊತೆಗಿದ್ದ ಜಯಪ್ರಕಾಶ್ ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ. ಹೊಳೆಯಿಂದ ಮೇಲೇಳಲು ಸಾಧ್ಯವಾಗದ ರಾಧಾಕೃಷ್ಣರು ಬಿದ್ದ ಜಾಗದಿಂದ 2 ಫರ್ಲಾಂಗ್ ದೂರ ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋದರು ಎನ್ನಲಾಗಿದೆ. ಚಾಕಟೆಡಿ ಬಳಿ ಮೃತದೇಹ ದೊರಕಿದೆ. ಮೃತ ರಾಧಾಕೃಷ್ಣರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.